*ಧಾರವಾಡ ಪ್ರವೇಶ ಕೇಳಿದ ಶಾಸಕ ವಿನಯ ಕುಲಕರ್ಣಿ ಅರ್ಜಿ ವಜಾ*
*ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು*
*ಧಾರವಾಡ ಗ್ರಾಮೀಣ ಶಾಸಕನಾಗಿರುವುದಕ್ಕೆಪ್ರವೇಶ ನೀಡಲು ಕೋರಿದ್ದ ಅರ್ಜಿ*
ಬೆಂಗಳೂರು ಪ್ರಜಾಕಿರಣ.ಕಾಮ್ : ನಾನು ಧಾರವಾಡ ಗ್ರಾಮೀಣ ಶಾಸಕನಾಗಿರುವುದರಿಂದ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಾಧೀಶರಾದ ಬಿ. ಜಯಂತಕುಮಾರ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಪಂ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆ ವೇಳೆ ಹದಿನೈದನೇ ಆರೋಪಿಯಾಗಿ ಬಂಧಿತರಾಗಿ ಆನಂತರ ಸುಪ್ರೀಂ ಕೋರ್ಟ್ ನಿಂದ ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗಡೆಯಿರುವ ವಿನಯ ಕುಲಕರ್ಣಿ ಅವರ ಮೇಲೆ ಧಾರವಾಡದ ನಾಲ್ಕನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಸಾಕ್ಷ್ಯ ನಾಶ ಪ್ರಕರಣದ ಅರ್ಜಿ ವಿಚಾರಣೆ ಬಾಕಿ ಇದೆ.
ಹಾಗೂ ಬಹುತೇಕ ಸಾಕ್ಷಿಗಳು ಧಾರವಾಡ ಜಿಲ್ಲೆಯಲ್ಲಿರುವುದರಿಂದ ಪ್ರವೇಶಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ.
ಇದಲ್ಲದೆ, ಸುಪ್ರೀಂ ಕೋರ್ಟ್ ಕೇವಲ ವಾರಕ್ಕೊಮ್ಮೆ ಸಿಬಿಐ ಕಚೇರಿಗೆ ತೆರಳಿ ಸಹಿ ಹಾಕುವ ಬದಲಿಗೆ ತಿಂಗಳಿಗೊಮ್ಮೆ ಸಹಿ ಹಾಕಲು ವಿನಾಯಿತಿ ನೀಡಿ ಧಾರವಾಡ ಜಿಲ್ಲೆಯ ಪ್ರವೇಶ ನಿರಾಕರಣೆ ಮಾಡಿರುವುದನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಉಲ್ಲೇಖಿಸಿ ಸುದೀರ್ಘ 41 ಪುಟಗಳ ತೀರ್ಪು ಪ್ರಕಟಿಸಿದೆ.