ನವದೆಹಲಿ prajakiran.com : ತೀವ್ರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ ದೇಶದ ಜನತೆಗೆ ಕುತೂಹಲ ಕೆರಳಿಸಿದ್ದ ರಫೇಲ್ ಯುದ್ದ ವಿಮಾನ ಕೊನೆಗೂ ನಿರೀಕ್ಷೆಯಂತೆ ಭಾರತದ ವಾಯುನೆಲೆ ಪ್ರದೇಶವಾದ ಹರಿಯಾಣದ ಅಂಬಾಲಗೆ ಬುಧವಾರ ಬಂದಿಳಿದವು.
ಎರಡು ಸುಖೋಯಿ ಯುದ್ದವಿಮಾನಗಳು ಐದು ರಫೇಲ್ ಯುದ್ದ ವಿಮಾನಗಳಿಗೆ ಎಸ್ಕಾರ್ಟ್ ಮಾಡಿ ಕೊಂಡು ಅದ್ದೂರಿ ಸ್ವಾಗತ ಕೋರಿದವು.
ಬಾನಂಗಳದಲ್ಲಿ ಅವರು ಸಾಲಾಗಿ ಹಾರಾಟ ಮಾಡಿಕೊಂಡು ಬರುವ ದೃಶ್ಯಗಳನ್ನು ನೋಡಿ ಭಾರತೀಯರು ಕಣ್ಣುತುಂಬಿಸಿಕೊಂಡರು.
ಭಾರತದ ನೌಕಾಪಡೆಯಿಂದ ಜಲವಂದನೆಯ ಮೂಲಕ ಸ್ವಾಗತಕೋರಲಾಯಿತು. ಭಾರತೀಯ ವಾಯುಸೇನೆ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ ಸ್ವಾಗತಿಸಿಕೊಂಡರು.
ಗ್ರೂಪ್ ಕ್ಯಾಪ್ಟನ್ ಹರಬಿಂದರ್ ಸಿಂಗ್ ಹಾಗೂ ತಂಡ ರಫೇಲ್ ಯುದ್ದವಿಮಾನಗಳನ್ನು ತೆಗೆದುಕೊಂಡು ಬಂದಿರುವುದು ವಿಶೇಷ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, ಭಾರತೀಯ ಸೇನೆಯ ಇತಿಹಾಸದಲ್ಲೊಂದು ನವಯುಗ ಆರಂಭವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಧೈರ್ಯ, ತೀರ್ಮಾನಕ್ಕೆ ಧನ್ಯವಾದ. ಆ ಮೂಲಕ ನಾವು ಒಂದು ಹೊಸ ಮೈಲಿಗಲ್ಲು ಸಾಧಿಸಿದ್ದೇವೆ.
ಲೋಹದ ಹಕ್ಕಿಗಳು ಭಾರತದ ವಾಯು ನೆಲೆಗೆ ಸುರಕ್ಷಿತವಾಗಿ ಆಗಮಿಸಿವೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಒಟ್ಟು 36 ರಫೇಲ್ ಯುದ್ದ ವಿಮಾನದ ಪೈಕಿ 5 ರಫೇಲ್ ಗಳು ಮೊದಲ ಹಂತದಲ್ಲಿ ಬಂದಿಳಿದಿವೆ. ಇನ್ನೂ 31 ಯುದ್ದ ವಿಮಾನಗಳು ಬರುವುದು ಬಾಕಿಯಿದೆ.