ಧಾರವಾಡ Prajakiran.Com : ಅನುದಾನ ರಹಿತ ಖಾಸಗಿ ಶಾಲೆಗಳ ಕುರಿತು ರಾಜ್ಯದ ಬಿಜೆಪಿ ಸರಕಾರ ಹೊಂದಿರುವ ಧೋರಣೆ ಖಂಡಿಸಿ ಧಾರವಾಡದ ಅನುದಾನ ರಹಿತ ಖಾಸಗಿ ಶಾಲೆಗಳ ಅಭಿವೃದ್ಧಿ ಸಂಸ್ಥೆ ಹಾಗೂ ಹುಬ್ಬಳ್ಳಿಯ ಧಾರವಾಡ ಜಿಲ್ಲಾ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳ ಸಂಘವು ಪ್ರತಿಭಟನಾ ಜಾಥಾ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ – ಧಾರವಾಡ ಅನುದಾನ ರಹಿತ ಖಾಸಗಿ ಶಾಲೆಗಳೆಲ್ಲವೂ ತಮ್ಮತಮ್ಮ ಶಾಲೆಗಳ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಸಂಬಂಧಿಸಿದಂತೆ ಸಮರ್ಥವಾಗಿ ಕಾರ್ಯಮಾಡುತ್ತಿದ್ದು , ಅನಾವಶ್ಯಕವಾಗಿ ಮತ್ತು ಕಾನೂನುಬಾಹಿರವಾಗಿ ಸರಕಾರ ಮತ್ತು ಶಿಕ್ಷಣ ಇಲಾಖೆ ಕಿರುಕಳ ನೀಡುತ್ತಿದೆ.
ಇದರಿಂದ ಪಾಲಕರ ಮತ್ತು ಶಾಲೆಗಳ ನಡುವಿನ ಸಾಮರಸ್ಯವನ್ನು ಕೆಡಿಸುವ ಮತ್ತು ಶಾಲೆಗಳನ್ನು ದುರ್ಬಲಗೊಳಿಸುವ ಕೆಲಸ ನಡೆದಿದೆ.
ಇದರಿಂದಾಗಿ ಶಿಕ್ಷಣ ಗುಣಮಟ್ಟ ಕುಸಿಯುವಂತಾಗಿದೆ. ಸರಕಾರದ ನಡೆಯನ್ನು ವಿರೋಧಿಸುವುದು ಅನಿವಾರ್ಯವಾಗಿದೆ ಎಂದು ಸಂಘ ದೂರಿದೆ.
ಈ ಹಿನ್ನೆಲೆಯಲ್ಲಿ ಅವಳಿ ನಗರದ ಎಲ್ಲ ಅನುದಾನರಹಿತ ಖಾಸಗಿ ಶಾಲೆಗಳನ್ನು ಬಂದ್ ಮಾಡಿ ಬೆಂಗಳೂರಲ್ಲಿ ಕಾಂಪ್ಸ್ ಹಾಗೂ ಇತರ ಸಂಘಟನೆಗಳು ಸೇರಿ ಪ್ರತಿಭಟನಾ ಜಾಥಾಕ್ಕೆ ಬೆಂಬಲಿಸಿವೆ.
ಅವಳಿ ನಗರದ ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು, ಶಿಕ್ಷಕರು, ಶಿಕ್ಷಕೇತರರು ಸೇರಿ ಧಾರವಾಡದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಜಾಥಾ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಹಾವೀರ ಉಪಾಧ್ಯೆ, ಸಿದ್ದೇಶ್ವರ ಸಾಲಿಮಠ, ರಾಘವೇಂದ್ರ ಸೊಂಡೂರು, ಮಹೇಂದ್ರ ಸಿಂಘ್ವಿ, ಶಂಕರ ಹಲಗತ್ತಿ, ಹುಬ್ಬಳ್ಳಿ ಸಂಘಟನೆ ಅಧ್ಯಕ್ಷರಾದ ಜಯಪ್ರಕಾಶ ಟೆಂಗಿನಕಾಯಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.