ಹಾಸನ prajakiran.com ಏ.29 : ಹುಬ್ಬಳ್ಳಿ ಗಲಭೆಕೋರರಿಗೆ ಸಹಾಯ ಮಾಡಲು ಮುಂದಾಗಿದ್ದ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ನಡೆ ಅಸಂವಿಧಾನಿಕ ಹಾಗೂ ಅಕ್ಷಮ್ಯ ಅಪರಾಧ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ಮುತಾಲಿಕ್ ಕಿಡಿಕಾರಿದ್ದಾರೆ.
ಅವರು ಹಾಸನ ಜಿಲ್ಲೆಯ ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಮೀರ್ ಅಹಮದ್ ಖಾನ್ ಈ ರೀತಿ ಕೃತ್ಯ ಎಸಗುತ್ತಿರುವುದು ಇದೇ ಮೊದಲಲ್ಲ ಎಂದು ಗುಡುಗಿದರು.
ಕಿಡಿಗೇಡಿಗಳಿಗೆ, ರೌಡಿಗಳಿಗೆ, ದೇಶದ್ರೋಹಿಗಳಿಗೆ, ಹಿಂದೂ ದೇವಸ್ಥಾನಗಳಿಗೆ ಕಲ್ಲು ಹೊಡೆದವರಿಗೆ ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸುವವರಿಗೆ ಹಣ, ಆಹಾರ ಕಿಟ್ ಕೊಡುವಂತಹದ್ದು ಬಾಬರ್ ಮತ್ತು ಔರಂಗ್ಜೇಬ್ ಮಾನಸಿಕತೆ ತೋರಿಸುತ್ತದೆ ಎಂದು ಜಮೀರ ಅಹ್ಮದ್ ವಿರುದ್ದ ಹರಿಹಾಯ್ದರು.
ಈ ಹಿನ್ನೆಲೆಯಲ್ಲಿ ಜಮೀರ್ ಶಾಸಕ ಸ್ಥಾನವನ್ನು ರದ್ದು ಮಾಡುವಂತೆ ರಾಜ್ಯಪಾಲರಿಗೆ ಮತ್ತು ಸಭಾಪತಿಗೆ ಪತ್ರ ಬರೆಯುತ್ತೇವೆ ಎಂದರು.
ಹುಬ್ಬಳ್ಳಿ ಗಲಭೆ ಬಗ್ಗೆ ರೋಶನ್ ಬೇಗ್ ಬೇಸರ ವ್ಯಕ್ತಪಡಿಸಿರುವುದನ್ನು ಸ್ವಾಗತ ಮಾಡುತ್ತೇನೆ. ತಪ್ಪನ್ನು ಒಪ್ಪಿಕೊಂಡರೆ ಸುಧಾರಣೆ ಆಗುತ್ತದೆ.
ಆದರೆ, ತಪ್ಪನ್ನು ಒಪ್ಪಿಕೊಳ್ಳದೆ, ಅವರು ಮಾಡಿಲ್ಲ ಅಂತ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್ ಹೇಳ್ತಾ ಇದೆ ಎಂದು ತರಾಟೆಗೆ ತೆಗೆದುಕೊಂಡರು.
ಅಝಾನ್ ವಿಚಾರವಾಗಿ ಕಳೆದ 6 ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ಮೇ. 1ರಂದು ಡಿಸಿಗಳಿಗೆ ಕೊಟ್ಟಂತಹ ಗಡುವು ಮುಕ್ತಾಯವಾಗುತ್ತದೆ.
ಸರ್ಕಾರ ಮೈಕ್ಗಳನ್ನು ತೆರವುಗೊಳಿಸದೆ ಇದ್ದರೆ, ಮೇ. 9 ರಂದು ಇಡೀ ರಾಜ್ಯಾದ್ಯಂತ ಬೆಳಗ್ಗೆ 5 ಗಂಟೆಗೆ ಕರ್ನಾಟಕದ ಒಂದು ಸಾವಿರ ದೇವಸ್ಥಾನಗಳಲ್ಲಿ ನಾವು ಸುಪ್ರಭಾತ, ಹನುಮಾನ್ ಚಾಲಿಸ್, ಓಂ ನಮಃ ಶಿವಾಯ ನಾಮಸ್ಮರಣೆಯನ್ನು ಪ್ರಾರಂಭ ಮಾಡುತ್ತೇವೆ. ತಾಕತ್ತಿದ್ದರೆ ತಡಿರಿ ನೋಡೋಣ ಎಂದು ಸವಾಲು ಹಾಕಿದರು.
ಮಸೀದಿ ಮೇಲಿನ ಮೈಕ್ ತೆರವುಗೊಳಿಸಲು ನಿಮಗೆ ತಾಕತ್ತಿಲ್ಲ, ನಮ್ಮ ದೇವಸ್ಥಾನಕ್ಕೆ ಬರ್ತಿರಾ, ಹೇಗೆ ಬರ್ತಿರಾ ಬನ್ನಿ ನೋಡೋಣ.
ಮೇ.9 ರಂದು ನಮ್ಮ ಪ್ರಾರ್ಥನೆ ಪ್ರಾರಂಭವಾಗುತ್ತಿದ್ದು, ಮೊದಲು ಮಸೀದಿ ಮೈಕ್ ತಡಿರಿ, ಆಮೇಲೆ ನಮ್ಮ ಕಡೆ ಬನ್ನಿ ಎಂದು ರಾಜ್ಯ ಸರ್ಕಾರಕ್ಕೆ ಪ್ರಮೋದ ಮುತಾಲಿಕ್ ಸವಾಲ್ ಹಾಕಿದರು.