ಧಾರವಾಡ prajakiran.com : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಅಂಗವಾಗಿ ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಅವರು ತಮ್ಮ ನಿವಾಸದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅಯೋಧ್ಯೆಯಲ್ಲಿ ಕೊನೆಗೂ ರಾಮಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ಪ್ರಮೋದ ಮುತಾಲಿಕ ಅವರು ಸಂತಸ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ತಮ್ಮ ಜೀವನ ಉದ್ದಕ್ಕೂ ಹೋರಾಟ ಮಾಡಿದ ಅಶೋಕ್ ಸಿಂಘಾಲ್ ಹಾಗೂ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿದರು.
ಇನ್ನೂ ಪ್ರಮೋದ್ ಮುತಾಲಿಕ ಅವರ ಮನೆ ಮುಂದೆ ಶ್ರೀರಾಮ ಸೇನೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಶ್ರೀ ರಾಮ ಸೇನೆ ರಾಜ್ಯ ಸಂಘಟಕ ಗಂಗಾಧರ ಕುಲಕರ್ಣಿ, ಶ್ರೀ ರಾಮ ಸೇನೆ ರಾಜ್ಯ ಉಪಾಧ್ಯಕ್ಷ ಡಾ. ಈಶ್ವರಗೌಡ ಪಾಟೀಲ್, ಪೂರ್ಣಾವಧಿ ಕಾರ್ಯಕರ್ತ ಮಹಾಲಿಂಗ ಅಗಳಿ, ಶ್ರೀ ರಾಮ ಸೇನೆ ಧಾರವಾಡ ಪ್ರಮುಖ ಪಾಂಡುರಂಗ, ಶ್ರೀ ರಾಮ ಸೇನೆ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.