ಜಿಲ್ಲೆಯಲ್ಲಿ ೫೦೬ ಕ್ಕಿಂತ ಹೆಚ್ಚು ಲಕ್ಷಣ ರಹಿತ ಕೊರೊನಾ ಸೋಂಕಿತರು
ಧಾರವಾಡ Prajakiran.com : ಲಕ್ಷಣ ರಹಿತ ಕೊರೊನಾ ಸೋಂಕಿತರಿಗೆ ಹೋಮ್ ಐಸೋಲೇಷನ್ ಆಯ್ಕೆಗೆ ಅವಕಾಶವಿರುವುದರಿಂದ ಹೆಚ್ಚು ಜನ ಹೋಮ್ ಐಸೋಲೇಷನ್ ಆಗುತ್ತಿದೆ.
ಅವರ ಮನೆಗೆ ಖುದ್ದು ಭೇಟಿ ನೀಡಿ ಆರೋಗ್ಯ ವಿಚಾರಿಸಲು ಮತ್ತು ಅಗತ್ಯ ಪರೀಕ್ಷೆ, ಆರೋಗ್ಯ ಸಲಹೆ ನೀಡಲು ವೈದ್ಯರ ನೇತೃತ್ವದಲ್ಲಿ ೨೪ ವಿಶೇಷ ತಂಡಗಳನ್ನು ರಚಿಸಿ, ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಅವರು ಕೊರೊನಾ ಸೋಂಕಿತರ ಶಿಫ್ಟಿಂಗ್ ತಂಡಗಳ ಮತ್ತು ಹೋಮ್ ಐಸೋಲೇಷನ್ ಮೇಲ್ವಿಚಾರಣೆ ತಂಡಗಳ ಸಭೆ ಜರುಗಿಸಿ, ಮಾತನಾಡಿದರು.
ಸೋಂಕಿತರ ಶಿಫ್ಟಿಂಗ್ ತಂಡ ಚನ್ನಾಗಿ ಕೆಲಸ ಮಾಡುತ್ತಿದೆ. ಆರಂಭದಲ್ಲಿ ಹೊಮ್ ಐಸೊಲೇಷನ್ ಆಯ್ಕೆ ಮಾಡಿಕೊಳ್ಳುವ ಸೋಂಕಿತರ ಸಂಖ್ಯೆ ಕಡಿಮೆ ಇತ್ತು.
ಈಗ ಹೆಚ್ಚು ಜನ ಹೊಮ್ ಐಸೊಲೇಷನ್ ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಹೆಚ್ಚು ತಂಡಗಳ ಅಗತ್ಯವಿದೆ. ಮತ್ತು ತಂಡಗಳು ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕೆಂದು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಸುಮಾರು ೫೦೬ ಕ್ಕಿಂತ ಹೆಚ್ಚು ಲಕ್ಷಣ ರಹಿತ ಕೊರೊನಾ ಸೋಂಕಿತರು ಹೊಮ್ ಐಸೊಲೇಷನ್ ಆಗಿದ್ದಾರೆ. ಅವರ ಮನೆಗಳಿಗೆ ಭೇಟಿ ನೀಡಿ, ಹೊಮ್ ಐಸೊಲೇಷನ್ ನಿಯಮಗಳ ಪಾಲನೆ, ಆರೋಗ್ಯ ಸ್ಥಿರತೆ ಹಾಗೂ ಮುನ್ನೆಚರಿಕೆ ಕ್ರಮಗಳ ಕುರಿತು ಮಾಹಿತಿ, ಮತ್ತು ಅವರ ಆರೋಗ್ಯ ಪರೀಕ್ಷೆಗಾಗಿ ಪ್ರತಿ ವೈದ್ಯರ ನೇತೃತ್ವದಲ್ಲಿ ಹುಬ್ಬಳ್ಳಿ ಹಾಗೂ ಇನ್ನಿತರ ತಾಲೂಕಿಗೆ ೧೬ ಮತ್ತು ಧಾರವಾಡ, ಅಳ್ನಾವರ ತಾಲೂಕಿಗೆ ೮ ತಂಡಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರತಿ ತಂಡವು ಪ್ರತಿ ದಿನ ಕನಿಷ್ಠ ೧೨ ರಿಂದ ೧೫ ಹೊಮ್ ಐಸೊಲೇಷನ್ ಆಗಿರುವ ಸೋಂಕಿತರ ಮನೆಗೆ ಭೇಟಿ ನೀಡಿ, ವರದಿ ಮಾಡುವುದು ಕಡ್ಡಾಯವಾಗಿದೆ.
ಹೊಮ ಐಸೊಲೇಷನ್ ಆದವರ ಮಾಹಿತಿಯನ್ನು ಸಂಗ್ರಹಿಸಿ, ಈ ತಂಡದೊಂದಿಗೆ ಸಂಪರ್ಕ ಮತ್ತು ಸಮನ್ವಯ ಸಾಧಿಸಲು ಭೂದಾಖಲೆಗಳ ಇಲಾಖೆ ಉಪನಿರ್ದೇಶಕಿ ನಜ್ಮಾ ಫೀರಜಾದೆ, ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ ಮತ್ತು ಸಮಾಜ ಕಲ್ಯಾಣ ಇಲಖೆ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ ಅವರ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹೊಮ್ ಐಸೊಲೇಷನದಲ್ಲಿರುವ ಸೋಂಕಿತರು ಯಾವುದೇ ಮಾಹಿತಿ, ಆರೋಗ್ಯ ಚಿಕಿತ್ಸೆ ಅಗತ್ಯವಿದ್ದಲ್ಲಿ ಹೊಮ್ ಐಸೊಲೇಷನ್ ತಂಡದ ನೋಡಲ್ ಅಧಿಕಾರಿ ಡಾ.ಸಂಪತಸಿಂಗ್ ರಂಗವಲ್ಲಿ ಅವರನ್ನು (ಮೊ.೯೪೪೮೭೪೬೪೯೯) ಸಂಪರ್ಕಿಸಬೇಕು.
ಯಾವ ವೈದ್ಯರ ತಂಡ ಯಾವ ಸೋಂಕಿತರ ಮನೆಗೆ ಭೇಟಿ ನೀಡಲಿದೆ ಎಂಬ ಮಾಹಿತಿಯನ್ನು ಅವರು ನೀಡುತ್ತಾರೆ.
ನೋಡಲ್ ಅಧಿಕಾರಿಯೂ ಪ್ರತಿ ದಿನ ಬೆಳಿಗ್ಗೆ ಮತ್ತು ಸಾಯಂಕಾಲ ತಂಡಗಳು ಹೊಮ್ ಐಸೊಲೇಷನ್ ಭೇಟಿ ನೀಡಿದ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಕೊರೊನಾ ಹಂತಹಂತವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಪ್ರತಿದಿನ ಕಂಡು ಬರುವ ಸೋಂಕಿತರಿಗಿಂತ ಹೆಚ್ಚು ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ.
ಜಿಲ್ಲಾಡಳಿತ ಎಲ್ಲ ಹಂತದಲ್ಲೂ ಮುಂಜಾಗೃತೆ ವಹಿಸಿ, ಸಮರ್ಪಕವಾಗಿ ಕೊರೊನಾ ಸೋಂಕಿತರ ಚಿಕಿತ್ಸೆ, ಸಾಮಾಜಿಕವಾಗಿ ಹರಡದಂತೆ ನಿಯಂತ್ರಿಸಲು ಕ್ರಮ ಕೈಗೊಂಡಿದೆ.
ಜನರು ಭಯ, ಆತಂಕ ಪಡದೆ ಪ್ರತಿಯೊಬ್ಬರು ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಕಾಪಾಡುವ ರೂಢಿ ಬೆಳೆಸಿಕೊಳ್ಳಬೇಕು. ಆಗಾಗ ಸ್ಯಾನಿಟೈಸರ್ ಬಳಕೆ ಅಥವಾ ಸೋಪನಿಂದ ಕೈ ತೋಳೆದುಕೊಳ್ಳಬೇಕು.
ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವು ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕೊರೊನಾ ಜಾಗೃತಿಗಾಗಿ ವಿವಿಧ ಇಲಾಖೆಗಳಿಂದ ಬೀದಿ ನಾಟಕ, ಬ್ಯಾನರ್, ಹೆದ್ದಾರಿ ಫಲಕ, ಧ್ವನಿಮುದ್ರಿಕೆ ಸೇರಿದಂತೆ ವಿವಿಧ ಸಮೂಹ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ಹಿರಿಯ ಅಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.