ಧಾರವಾಡ prajakiran.com : ಧಾರವಾಡದ ಇತಿಹಾಸ ಪ್ರಸಿದ್ದ ವನವಾಸಿ ರಾಮಮಂದಿರಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ತನಿಖೆ ನಡೆಸಿದರು.
ಇಲ್ಲಿನ ತೇಜಸ್ವಿ ನಗರ ನಿವಾಸಿ ಕಿಶೋರ ಕಟ್ಟಿ ವಿದ್ಯಾಗಿರಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಧಾರವಾಡದ ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ. ನೇತೃತ್ವ್ವದಲ್ಲಿ ಅಧಿಕಾರಿಗಳು ಸೋಮವಾರ ಭೇಟಿ ನೀಡಿ, ತನಿಖೆ ನಡೆಸಿದರು.
ಕಳೆದ ನ.೨೯ ರಂದು ರಾತ್ರಿ ೮ ಗಂಟೆ ಸುಮಾರಿಗೆ ರಾಮ ಮಂದಿರಕ್ಕೆ ದೇವರ ದರ್ಶನಕ್ಕೆ ಹೋಗಿದ್ದ ತಮಗೆ ಆರ್.ಪಿ.ಕುಲಕರ್ಣಿ ಎಂಬುವರು, ಕೆಳ ಜಾತಿಯವರು ದೇವಸ್ಥಾನಕ್ಕೆ ಬರದಂತೆ ಅವಾಜ್ ಹಾಕಿದ್ದರು.
ಅಲ್ಲದೆ, ತಮ್ಮನ್ನು ಜಾತಿ ಸೂಚಕ ಪದ ಬಳಸಿ ನಿಂದಿಸಿದ್ದಾರೆ. ಆದ್ದರಿಂದ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿಸೆಂಬರ ೨ ರಂದು ವಿದ್ಯಾಗಿರಿ ಠಾಣೆಗೆ ನೀಡಿರುವ ದೂರಿನಲ್ಲಿ ಆಪಾದಿಸಿದ್ದರು.
ಕಿಶೋರ ಕಟ್ಟಿ ದೂರಿನ ಆಧಾರದ ಮೇಲೆ ಎಸಿಪಿ ಅನುಷಾ ಜಿ. ಭೇಟಿ ನೀಡಿ, ಮಂದಿರದಲ್ಲಿನ ಸಿ.ಸಿ. ಟಿವಿ ದೃಶ್ಯಗಳನ್ನು ಮತ್ತು ಸಾಂದರ್ಭಿಕ ಸಾಕ್ಷಿಗಳ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ವಿದ್ಯಾಗಿರಿ ಠಾಣೆಯ ಪಿಎಸ್ಐ ಸಚಿನ್ ದಾಸರಡ್ಡಿ ಮತ್ತು ಸಿಬ್ಬಂದಿ ಸಾಥ್ ನೀಡಿದ್ದರು.
ಕಳೆದ ಕೆಲವು ವರ್ಷಗಳಿಂದ ಶ್ರೀ ವನವಾಸಿ ರಾಮಮಂದಿರದ ಆಡಳಿತ ಮಂಡಳಿಯಲ್ಲಿ ಎರಡು ಗುಂಪುಗಳಾಗಿದ್ದು, ಅವರ ಮಧ್ಯೆ ತಿಕ್ಕಾಟ ನಡೆದಿದೆ.
ಇಂತಹ ಸಂದರ್ಭದಲ್ಲಿ ಈ ಪ್ರಕರಣ ವನವಾಸಿ ರಾಮ ಮಂದಿರದ ಗೌರವಕ್ಕೆ ಮತ್ತಷ್ಟು ಧಕ್ಕೆ ತಂದಿದೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.