ಧಾರವಾಡ prajakiran.com ಡಿ.04 : 2007-2008 ನೇ ಸಾಲಿನಲ್ಲಿ ಧಾರವಾಡದ ಎಸ್ಡಿಎಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿಯಾದ ನಿವೃತ್ತ ಡಿವೈಎಸ್ಪಿ ಮಗನಾದ ಜಾಫರ್ ಖಾನ್ ತಡಕೋಡ ತನ್ನ ಬದಲಿಗೆ ಬೇರೆಯೊಬ್ಬ ಅಭ್ಯರ್ಥಿಯಾದ ಪ್ರಶಾಂತ ಬಡಿಗೇರ ನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅಸಲಿ ಅಭ್ಯರ್ಥಿಯನ್ನಾಗಿ ರೂಪುಗೊಳಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿದ್ದನು.
ದಿನಾಂಕ 08-07-2008 ರಂದು ಸದರಿ ನಕಲಿ ವಿದ್ಯಾರ್ಥಿ ಪ್ರಶಾಂತ ಬಡಿಗೇರ ಮೂರನೇ ಸೆಮಿಸ್ಟೆರ ಪರೀಕ್ಷೆ ಬರೆಯುವಾಗ ಬೆಳಗಾವಿಯ ವಿಶ್ವೇಶ್ವರಯ್ಯಾ ಟೆಕ್ನಾಲಜಿ ಯುನಿವರ್ಸಿಟಿಯ ಅಧಿಕಾರಿಗಳ ಪರಿಶೀಲನೆ ಸಂದರ್ಭದಲ್ಲಿ ಈತನು ನಕಲಿ ವಿದ್ಯಾರ್ಥಿ ಎಂದು ತಿಳಿದಿದ್ದರಿಂದಾಗಿ ಕಾಲೇಜು ಪ್ರಾಂಶುಪಾಲರು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗೆ ಪ್ರಶಾಂತ ಬಡಿಗೇರ ಹಾಗೂ ನಿವೃತ್ತ ಡಿವೈಎಸ್ಪಿ ಮಗನಾದ ಜಾಫರ್ ಖಾನ್ ತಡಕೋಡ ವಿರುದ್ಧ ದೂರು ನೀಡಿದ್ದರು.
ದೂರನ್ನು ಸ್ವೀಕರಿಸಿ ಪಿ.ಎಸ್.ಐ ಜೆ.ಎಮ್ ಕಾಲಿಮಿರ್ಚಿ ಅವರು ಮೊಕದ್ದಮೆ ದಾಖಲಿಸಿದ್ದರು.
ಈ ಬಗ್ಗೆ ತನಿಖೆ ಕೈಗೊಂಡಿದ್ದ ಎ.ಎಸ್.ಐ ಎಸ್.ಎಫ್ ದೊಡಮನಿ, ಇನ್ಸ್ಪಕ್ಟರ್ ವಿಜಯ ಬಿರಾದರ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಧಾರವಾಡದ ಮೂರನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಢಾಧಿಕಾರಿಗಳ ನ್ಯಾಯಾಲಯದ ನ್ಯಾಯಾಧೀಶ ಮಹೇಶ ಚಂದ್ರಕಾಂತ ಅವರು ಇಬ್ಬರು ಆರೋಪಿತರಾದ ರಾಮದುರ್ಗದ ಪ್ರಶಾಂತ ಬಡಿಗೇರ ಹಾಗೂ ಧಾರವಾಡ ಸಾಧನಕೇರಿಯ ನಿವಾಸಿಯಾದ ನಿವೃತ್ತ ಡಿವೈಎಸ್ಪಿ ಮಗನಾದ ಜಾಫರ್ ಖಾನ್ ತಡಕೋಡ ತಪ್ಪಿತಸ್ಥರೆಂದು ತಿರ್ಮಾನಿಸಿ, ನವೆಂಬರ್ 27-2021 ರಂದು ಆರು ತಿಂಗಳು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ನಕಲಿ ವಿದ್ಯಾರ್ಥಿಯನ್ನು ಅಸಲಿ ವಿದ್ಯಾರ್ಥಿ ಎಂಬಂತೆ ಸೋಗು ಹಾಕಿ ಮೋಸ ಮಾಡಿದ ಅಪರಾಧಕ್ಕಾಗಿ ಆರು ತಿಂಗಳು ಶಿಕ್ಷೆ ಹಾಗೂ ಒಂದು ಸಾವಿರ ದಂಡ ಮತ್ತು ಮೋಸ ಮಾಡಿದ ಅಪರಾಧಕ್ಕಾಗಿ ಇಬ್ವರಿಗೂ ಆರು ತಿಂಗಳು ಜೈಲು ಶಿಕ್ಷೆ ಹಾಗೂ ತಲಾ ಒಂದು ಸಾವಿರ ದಂಡ, ದಾಖಲಾತಿಗಳನ್ಬು ಪೋರ್ಜರಿ ಮಾಡಿದ್ದಕ್ಕಾಗಿ ಇಬ್ವರಿಗೂ ಆರು ತಿಂಗಳು ಜೈಲು ಶಿಕ್ಷೆ ಹಾಗೂ ತಲಾ ಒಂದು ಸಾವಿರ ದಂಡ, ಮೋಸ ಮಾಡುವ ಉದ್ದೇಶಕ್ಕಾಗಿ ಪೋರ್ಜರಿ ಮಾಡಿದ ಅಪರಾಧಕ್ಕಾಗಿ ಇಬ್ವರಿಗೂ ಆರು ತಿಂಗಳು ಜೈಲು ಶಿಕ್ಷೆ ಹಾಗೂ ತಲಾ ಒಂದು ಸಾವಿರ ದಂಡ, ಪೋರ್ಜರಿ ಮಾಡಿದ ದಾಖಲೆಗಳೆಂದು ಗೊತ್ತಿದ್ದರೂ ಸಹ ಅವು ನಿಜವಾದ ದಾಖಲೆಗಳೆಂದು ಉಪಯೋಗಿಸಿದ್ದಕ್ಕಾಗಿ ಇಬ್ವರಿಗೂ ಆರು ತಿಂಗಳು ಜೈಲು ಶಿಕ್ಷೆ ಹಾಗೂ ತಲಾ ಒಂದು ಸಾವಿರ ದಂಡ ವಿಧಿಸಲಾಗಿದೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ವಕೀಲರಾದ ಆರ್. ಜಿ ದೇವರೆಡ್ಡಿ ಹಾಗೂ ಅನೀಲಕುಮಾರ ಆರ್. ತೊರವಿ ವಕಾಲತ್ತು ವಹಿಸಿದ್ದರು.