ಧಾರವಾಡ prajakiran.com : ಸರಕಾರಿ ಗೋಮಾಳ, ಕೆರೆ ಜಾಗ, ಹಳ್ಳ, ಕೊಳ್ಳಗಳ ಜಾಗ ಒತ್ತುವರಿ ಮಾಡಿಕೊಂಡು ಅತಿಕ್ರಮ ಮನೆಗಳನ್ನು ಕಟ್ಟಿಕೊಳ್ಳುವುದು ಮಾಮೂಲಿ.
ಆದರೆ ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ ಪೊಲೀಸ್ ಠಾಣೆಯ ಜಾಗವನ್ನೇ ಕೆಲವರು ಅತಿಕ್ರಮಣ ಮಾಡಿಕೊಂಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರುತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಆಕ್ರಮಿಸಲ್ಪಟ್ಟಿದ್ದ ಪೊಲೀಸ್ ಠಾಣೆ ಹಾಗೂ ಕ್ವಾಟರ್ಸ್ ಜಾಗದ ಸಮೀಕ್ಷೆ ಕಾರ್ಯ ನಡೆಸಿ ಅದನ್ನು ತೆರವುಗೊಳಿಸಿ ಗಮನ ಸೆಳೆದರು.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ವರ್ತಿಕಾ ಕಟಿಯಾರ್ ಅವರ ನೇತೃತ್ವದಲ್ಲಿ ಶುಕ್ರವಾರ ಜಾಗೆಯ ಗಡಿ ಗುರುತು ಹಾಗೂ ಭೂ ಸಮೀಕ್ಷೆ ನಡೆಸಲಾಯಿತು.
ಮುಗದ ಗ್ರಾಮದ ಒಂದು ಎಕರೆ ಜಾಗದಲ್ಲಿ ಪೊಲೀಸ್ ಠಾಣೆ, ಪಿಎಸ್ಐ ಹಾಗೂ ೧೨ ಜನ ಸಿಬ್ಬಂದಿಗಳ ಕ್ವಾಟರ್ಸ್ ಇತ್ತು.
ಆದರೆ ಅದು ಅಳ್ನಾವರಕ್ಕೆ ಸ್ಥಳಾಂತರಗೊಂಡ ನಂತರ ಸ್ಥಳೀಯರು ಅತಿಕ್ರಮಣ ಮಾಡಿಕೊಂಡಿದ್ದರು.
ಅಲ್ಲದೇ ಕಳೆದ ೧೫ ವರ್ಷಗಳಿಂದಅಲ್ಲಿಯೇ ಸ್ಥಳೀಯರು ಕ್ವಾಟರ್ಸ್ ಜಾಗದಲ್ಲಿಯೇ ಠಿಕಾಣಿ ಹೂಡಿದ್ದರು. ಈ ಬಗ್ಗೆ ಅನೇಕ ಬಾರಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳಿಗೆ ದೂರು ನೀಡಲಾಗಿತ್ತು.
ಆದರೆ, ಈ ಹಿಂದಿನ ಎಸ್ಪಿಗಳು ಈ ಬಗ್ಗೆ ಸ್ಪಂದಿಸಿರಲಿಲ್ಲ. ಇದೀಗ ಆ ಕಾರ್ಯವನ್ನು ಎಸ್ಪಿ ವರ್ತಿಕ ಕಟಿಯಾರ್ ಪೂರ್ಣಗೊಳಿಸುವ ಮೂಲಕ ಪೊಲೀಸ್ ಇಲಾಖೆಯ ಜಾಗವನ್ನು ಮರಳಿ ಹಿಂಪಡೆದುಕೊಂಡರು.
ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಹಕಾರದೊಂದಿಗೆ ಮುಗದ ಗ್ರಾಮದ ಪೊಲೀಸ್ ಠಾಣೆ ಒಂದು ಎಕರೆ ಜಾಗದ ಪೂರ್ವ- ಪಶ್ಚಿಮ ಹಾಗೂ ಉತ್ತರ- ದಕ್ಷಿಣವಾಗಿ ಅಳತೆ ಮಾಡಿ, ಆಕ್ರಮಿಸಿಕೊಂಡ ಸ್ಥಳೀಯರಿಂದ ಪಂಚಾಯಿತಿ ಅಧಿಕಾರಿಗಳೇ ಜಾಗ ತೆರವುಗೊಳಿಸಿಕೊಡಲು ಅಧಿಕಾರಿಗಳಿಗೆ ಎಸ್ಪಿ ಸೂಚಿಸಿದರು.
ಸಮೀಕ್ಷೆ ಪೂರ್ಣಗೊಳಿಸಿ ಗಡಿ ನಿರ್ಮಿಸಿದ ಕಾರಣಕ್ಕೆ ಇನ್ಮುಂದೆ ಭವಿಷ್ಯದಲ್ಲಿ ಈ ಜಾಗ ಅತಿಕ್ರಮಿಸುವ ಪ್ರಶ್ನೆಯೇ ಉದ್ಭವಿಸಲಾರದು ಎಂದು ಗ್ರಾಮಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.