ಹತ್ತು ಹಲವಾರು ಕಡತ ಪರಿಶೀಲನೆ ನಡೆಸಿದ ಅಧಿಕಾರಿಗಳು
ನಿಷ್ಪಕ್ಷಪಾತ ತನಿಖೆ ನಡೆಸಲು ಬಸವರಾಜ ಕೊರವರ ಒತ್ತಾಯ
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಈ ಹಿಂದಿನ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ ಅವಧಿಯಲ್ಲಿ ರೈತರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಖಾತೆ ತೆಗೆದು ಎರಡನೇ ಬಾರಿ ಕೋಟ್ಯಾಂತರ ರೂಪಾಯಿ ಪರಿಹಾರ ಪಡೆದ ಕುರಿತು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ದಾಖಲೆ ಬಿಡುಗಡೆ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೆ ಐ ಎ ಡಿ ಬಿ ಹಿರಿಯ ಅಧಿಕಾರಿ ವರ್ಗದವರು ಈ ಕುರಿತು ತನಿಖೆ ಆರಂಭಿಸಿದೆ.
ಸೋಮವಾರ ಹಾಗೂ ಮಂಗಳವಾರ ಧಾರವಾಡ ಕಚೇರಿಗೆ ಆಗಮಿಸಿದ ಭೂಸ್ವಾಧೀನ ವಿಶೇಷ ಜಿಲ್ಲಾಧಿಕಾರಿ
ಮಂಜುನಾಥ ನೇತೃತ್ವದಲ್ಲಿ ಒಂಬತ್ತು ಜನ ಅಧಿಕಾರಿಗಳು ಕಡತಗಳನ್ನು ತೆಗೆದುಕೊಂಡು ಕೂಲಂಕುಷವಾಗಿ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದ್ದಾರೆ.
ಇವತ್ತು ಕೂಡ ತನಿಖೆ ಮುಂದುವರೆಯಲಿದ್ದು, ದಾಖಲೆ ಪರಿಶೀಲನೆ ನಡೆಸಿ ಅದರಲ್ಲಿ ಕಂಡು ಬರುವ ಲೋಪದೋಷಗಳನ್ನು, ಅಕ್ರಮ, ಅವ್ಯವಹಾರ ನಡೆಸಿದ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ಆ ಬಳಿಕ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಜರುಗಿಸುತ್ತದೆ ಎಂಬುದು ಕಾದುನೋಡಬೇಕಿದೆ.
ಈ ಕುರಿತು ಮಂಗಳವಾರ ಧಾರವಾಡದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ರೈತರ ಹೆಸರಿನ ನಕಲಿ ಬ್ಯಾಂಕ್ ಖಾತೆಗೆ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ನಡೆಸಿದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಬೇಕು.
ಕೆ ಐ ಎ ಡಿ ಬಿಯ ಭ್ರಷ್ಟ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಬಚಾವ್ ಮಾಡುವ ಕೆಲಸ ಆಗಬಾರದು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಸರಕಾರದ ಬೊಕ್ಕಸಕ್ಕೆ ಆದ ನಷ್ಟ ವಸೂಲಿ ಮಾಡುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯ ಮಾಡಿದರು.
ಅವರ ತನಿಖೆ ವರದಿಯನ್ನು ನೋಡಿ ನಾವು ಮುಂದಿನ ಕಾನೂನು ಹೋರಾಟ ನಡೆಸುತ್ತೇವೆ ಎಂದು ಬಸವರಾಜ ಕೊರವರ ಎಚ್ಚರಿಸಿದರು.