ಧಾರವಾಡ prajakiran.com : ನಾಡೋಜ ಚೆನ್ನವೀರ ಕಣವಿ ಅವರಿಗೆ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಮ್.ಮಹೇಶ್ವರಯ್ಯಅವರು ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವದ ಅಂಗವಾಗಿ ಗೌರವ ಡಾಕ್ಟರೇಟ್ ಪದವಿಯನ್ನು ಸೋಮವಾರ ಸಂಜೆ ನಗರದ ಕಣವಿ ಅವರ ನಿವಾಸದಲ್ಲಿ ಪ್ರದಾನಮಾಡಿದರು,
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಇದುವರೆಗೆ ದೇಶದ ೧೩ ಜನ ಸಾಧಕರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ.
ವಿಶ್ವವಿದ್ಯಾಲಯವು ಈ ಬಾರಿ ನೀಡಿರುವ ೫ ಜನ ಗೌರವ ಡಾಕ್ಟರೇಟ್ ಪುರಸ್ಕೃತರಲ್ಲಿ ಕನ್ನಡಿಗರಿಗೆ ಹೆಚ್ಚು ಮನ್ನಣೆಯನ್ನು ಗೌರವಾನ್ವಿತ ರಾಷ್ಟ್ರಪತಿಗಳು ನೀಡಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಪದವಿ ಸ್ವೀಕರಿಸಿ ಮಾತನಾಡಿದ ನಾಡೋಜ ಡಾ.ಚೆನ್ನವೀರ ಕಣವಿ ಮಾತನಾಡಿ, ಕೇಂದ್ರೀಯ ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್ ಪದವಿಯನ್ನು ಸಮಸ್ತ ಸಹೃದಯಿ ಕನ್ನಡಿಗರಿಗೆ ಸಮರ್ಪಣೆ ಮಾಡಿದ್ದೇನೆ.
ಈ ಪದವಿಯು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವದಷ್ಟೇ ಸಮಾನವಾಗಿದೆ ಎಂದರು.
ಇದೇ ವೇಳೆ ವಿನಯ ಪೂರ್ವಕವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿ, ‘ಅಭಿವಂದನೆ’ ಎಂದರೆ ಗೌರವ ಪೂರ್ವಕ ನಮಸ್ಕಾರ ಎಂಬ ಕವಿತೆ ವಾಚಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಮ್. ಹಿರೇಮಠ, ಪ್ರೊ. ಎಸ್.ಎಮ್.ಶಿವಪ್ರಸಾದ, ರಾಜೇಶ್ವರಿ ಮಹೇಶ್ವರಯ್ಯ, ನಿಂಗಣ್ಣ ಕುಂಟಿ, ಬಿ.ಎಸ್. ಶಿರೋಳ, ವಿಜಯಕುಮಾರ್ ಗಿಡ್ನವರ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.