ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಸಿಬಿಐ ವಿಚಾರಣೆ ಸೋಮವಾರವು ಮುಂದುವರೆಯಿತು.
ಕಳೆದ ಹಲವು ತಿಂಗಳಿಂದ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿಯೇ ವಿಚಾರಣೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳ ತಂಡ ಸೋಮವಾರಅದರ ಬದಲಿಗೆ ವಿಚಾರಣೆಯನ್ನು ಧಾರವಾಡದ ಡಯಟ್ ಆವರಣಕ್ಕೆ ಸ್ಥಳಾಂತರಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಕಳೆದ ಹಲವು ದಿನಗಳಿಂದ ಸಿಬಿಐ ವಿಚಾರಣೆ ಎದುರಿಸುತ್ತಿರುವ ಧಾರವಾಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರನ್ನು ಸೋಮವಾರವು ಐದನೇ ಬಾರಿಗೆ ವಿಚಾರಣೆ ನಡೆಸಿದರು.
ಇವರಷ್ಟೇ ಅಲ್ಲದೆ, ಈ ಹಿಂದೆ ಧಾರವಾಡ ಶಹರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಆಗಿದ್ದ ಸದ್ಯ ಡಿವೈಎಸ್ಪಿ ಆಗಿರುವ ಶಿವಾನಂದ ಚಲವಾದಿ, ಹೆಡ್ ಕಾನ್ಸಟೇಬಲ್ ಶಂಕರಗೌಡ ಪಾಟೀಲ, ಈ ಹಿಂದೆ ಧಾರವಾಡ ತಹಸೀಲ್ದಾರ್ ಕಚೇರಿಯ ಗ್ರಾಮ ಲೆಕ್ಕಿಗನಾಗಿದ್ದ ವಿರೇಶ ಬ್ಯಾಹಟ್ಟಿ ಸೇರಿದಂತೆ ಅನೇಕರನ್ನು ವಿಚಾರಣೆಗೊಳಿಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದರು ಎಂದು ಹೇಳಲಾಗುತ್ತಿದೆ.
ಯೋಗೀಶಗೌಡ ಗೌಡರ ಕೊಲೆಗೆ ಧಾರವಾಡ ತಾಲೂಕಿನ ಬೆಳ್ಳಿಗಟ್ಟಿ ಬಳಿಯಿರುವ ಭೂ ವಿವಾದವೇ ಕಾರಣ ಎಂದು ಹೇಳಿದ್ದರಿಂದ ಆ ನಿಟ್ಟಿನಲ್ಲಿಯೂ ಸಿಬಿಐ ಅಧಿಕಾರಿಗಳ ತಂಡ ತನಿಖೆ ನಡೆಸಿದೆ ಎಂದು ತಿಳಿದುಬಂದಿದೆ.
2016 ರ ಜೂನ್ 15ರಂದು ಧಾರವಾಡದ ಸಪ್ತಾಪೂರನಲ್ಲಿದ್ದ ಉದಯ್ ಜಿಮ್ ನಲ್ಲಿ ಹೆಬ್ಬಳ್ಳಿ ಜಿಪಂ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರನ್ನು ಬೆಳ್ಳಂ ಬೆಳಗ್ಗೆ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.
ಈ ಪ್ರಕರಣವನ್ನು ರಾಜ್ಯದಲ್ಲಿ ಆಡಳಿತಕ್ಕೆ ಬಂದ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸಿಬಿಐ ತನಿಖೆಗೆ ವಹಿಸಿತ್ತು.
ಪ್ರಕರಣದ ಜಾಡು ಹಿಡಿದು ಕುಲೂಂಕುಶ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಎಳು ಜನರನ್ನು ಬಂಧಿಸಿತ್ತು.
ಈ ಪೈಕಿ ಒಬ್ಬ ಹೊರಗಡೆಯಿದ್ದು, ಆರು ಜನರು ಧಾರವಾಡದ ಕೇಂದ್ರ ಕಾರಾಗೃಹದಲ್ಲಿರುವುದು ಇಲ್ಲಿ ಸ್ಮರಿಸಬಹುದು.