ಧಾರವಾಡ prajakiran.com : ಜಿಪಂ ಸದಸ್ಯ ಯೋಗೀಶಗೌಡ ಗೌಡರ ತಾಯಿ ತುಂಗವ್ವ ಗೌಡರ್ಅವರು ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಇಂದು ವಿನಯ ಕುಲಕರ್ಣಿ ಅವರ ಧಾರವಾಡ ನಿವಾಸಕ್ಕೆ ಭೇಟಿ ನೀಡಿದ್ದ ಸ್ವಾಮೀಜಿ ವಿರುದ್ದ ತಮ್ಮ ಅಸಮಾಧಾನ ಹೊರ ಹಾಕಿದ್ದು, ಪತ್ರದ ಸಾರಾಂಶ ಹೀಗಿದೆ.
ತಾವು ನನ್ನ ಮೃತ ಮಗ ದಿ. ಯೋಗೀಶಗೌಡನ ಕೊಲೆ ಪ್ರಕರಣದಲ್ಲಿ ಈಗ ಎರಡು ದಿನಗಳಲ್ಲಿ ಆಸಕ್ತಿ ತೋರಿಸುತ್ತಿರುವುದು ನನಗೆ ದುಖಃ ಆಶ್ಚರ್ಯ ತಂದಿದೆ . ನಾನು ನನ್ನ ಪತಿ ಮತ್ತು ಪೂರ್ವಜರ ಕಾಲದಿಂದಲೂ ಹಿಂದೂ ಲಿಂಗಾಯತ ಪಂಚಮಸಾಲಿ ಧರ್ಮವನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿದ್ದೇನೆ .
ಯೋಗೀಶಗೌಡ ಗುರುನಾಥಗೌಡ ಇವರು ನಿತ್ಯ ಲಿಂಗಪೂಜೆ ಇಲ್ಲದೇ ನೀರನ್ನೂ ಮುಟ್ಟುವುದಿಲ್ಲ ನಾನೂ ಕೂಡಾ ನಿಷ್ಠೆಯಿಂದ , ಮಠದ ಅನುಯಾಯಿಯಾಗಿದ್ದೇನೆ . ಮಂತ್ರಿ , ಶಾಸಕರಷ್ಟಲ್ಲದಿದ್ದರೂ ನಮ್ಮ ಶಕ್ತಿಯಾನುಸಾರ ಮಠಕ್ಕೆ ಸೇವೆ ಮಾಡಿದ್ದೇವೆ ಮುಂದೂ ಮಾಡುತ್ತೇವೆ . ಮುಂದೂ ಮಾಡುತ್ತೇವೆ .
ಈ ನನ್ನ ಇಳಿ ವಯಸ್ಸಿನಲ್ಲಿ ನನ್ನ ಕಣ್ಮಣಿಯಾಗಿದ್ದ ಮಗ ಯೋಗೀಶಗೌಡನನ್ನು ರಾಜಕೀಯ ದ್ವೇಶಕ್ಕಾಗಿ ಕಳೆದುಕೊಂಡ ನನ್ನ ತಾಯಿ ಕರುಳಿನ ದುಖಃ ನಿಮಗೆ ಎಂದೂ ತಿಳಿಯುತ್ತಿಲ್ಲವೇ ?
ಆತನ ಮಕ್ಕಳು ಅನಾಥರಾದ ಬಗ್ಗೆ ನಿಮಗೆ ಎಂದೂ ಅನುಕಂಪ ಬರಲಿಲ್ಲವೇ ? ಅಷ್ಟೇ ಅಲ್ಲ ಒಂದು ಕಡೆ ತಾಯಿಯಾಗಿ ನಾನು ಎರಡು ಮಕ್ಕಳ ಕೊಲೆ ಕಂಡ ವಿಧವೆ ,
ಆಗ ನಾನು ಅದೇ ತಾನೇ ಬಾಣಂತಿಯಾಗಿದ್ದ ಗುರುನಾಥಗೌಡನ ಪತ್ನಿಯೊಂದಿಗೆ ಭಯದಲ್ಲಿ ಜೀವನ ಸವೆಸುತ್ತಿದ್ದನು , ಏಕೆಂದರೆ ಯೋಗೀಶಗೌಡನ ಕೊಲೆಗೆ ಕಾರಣರಾಗಿದ್ದ ಆಗಿನ ಅಧಿಕಾರಾರೂಢರು ನಮ್ಮ ಬಣವಿಯಲ್ಲಿ ಪಿಸ್ತೂಲು ಸಿಕ್ಕಿದೆ ಎಂದು ಸುಳ್ಳು ಸೃಷ್ಟಿಸಿ ನನ್ನ ಉಳಿದಿದ್ದ ಮಗ ಗುರುನಾಥಗೌಡನನ್ನು ಬಂಧಿಸಿ 5 ತಿಂಗಳು ಜೈಲು ಪಾಲು ಮಾಡಿದರು . ಮೃತ ಯೋಗೀಶನ ಪತ್ನಿಯನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು .
ಪ್ರತಿ ನಿತ್ಯ ನಮಗೆ ನನ್ನ ಹಿರಿಯ ಸೊಸೆ ಬಾಣಂತಿ ಆಗಿದ್ದವಳಿಗೆ ಮಗಳು ಅಕ್ಕಮ್ಮನಿಗೆ ಜೀವ ಬೆದರಿಕೆ ಪೋಲಿಸ್ ದರ್ಪದಿಂದ ಒತ್ತಡ ಹೇರಿ ಸಮಸ್ಯೆಯಲ್ಲಿದ್ದಾಗ ನಾನು ಬದುಕಿದ್ದೇ ಆ ಬಸವನ ಕೃಪೆಯಿಂದ .
ಆದರೂ ನಾನು ನನ್ನ ಮಕ್ಕಳು ಸುಪ್ರೀಂಕೋರ್ಟ್ವರೆಗೆ ಹೋರಾಟ ಬಿಟ್ಟಿಲ್ಲ ನ್ಯಾಯಕ್ಕಾಗಿ ಕಾಯುತ್ತಿದ್ದೇವೆ . ಈಗ ಪಂಚಮಸಾಲಿ ಸ್ವಾಮಿಗಳಿಗೆ ನ್ಯಾಯ ಕೇಳುವುದು ತಪ್ಪೇ ?
ಈ ಕೂಗು ನಿಮ್ಮ ಕಿವಿ , ಹೃದಯ ತಲುಪಿಲ್ಲವೇ ? ಯೋಗೀಶಗೌಡ ಜೀವಂತವಿದ್ದಾಗ ಎರಡು ಬಾರಿ ನಮ್ಮ ಮನೆಗೆ ಬಂದು ನಮ್ಮನ್ನು ಆಶೀರ್ವದಿಸಿದ್ದೀರಿ.
ಈಗ ನಾವು ಕೂಡಾ ಪಂಚಮಸಾಲಿ ಆಗಿದ್ದರೂ ಒಮ್ಮೆಯಾದರೂ ಯೋಗೀಶನ ಕೊಲೆ ಆದಾಗ ಗುರುನಾಥ ಜೈಲು ಸೇರಿದಾಗ ನಮಗೆ ಪ್ರಾಣ ಭಯವಿದ್ದಾಗ ತಾವು ನಮ್ಮ ಮನೆಗೆ ಬರುವುದಿರಲಿ ಒಮ್ಮೆ ದೂರವಾಣಿಯಲ್ಲಾದರೂ ನಮ್ಮ ಸುಖ ದುಖಃ ವಿಚಾರಣೆ ಮಾಡಿದ್ದೀರಾ ?
ನಿಮಗೆ ಆತ್ಮ ಸಾಕ್ಷಿ ಇದ್ದರೆ ನಿಜವಾದ ಬಸವ ಧರ್ಮದ ಭಯವಿದ್ದರೆ ನಮ್ಮ ಮನೆಗೆ ಬಂದು ಬಡ ಭಕ್ತರ ಕಷ್ಟ ಕೇಳಿ , ನಮ್ಮಲ್ಲಿ ಹಣ ಅಧಿಕಾರ ಇರಲಿಕ್ಕಿಲ್ಲ .
ಆದರೂ ನಾವೂ ಕೂಡಾ ಬಸವನ ಭಕ್ತರೇ ಆಗಿದ್ದೇವೆ ಎಂದು ಆಣಿ ಮಾಡಿ ಹೇಳುತ್ತೇವೆ . ಜಗಜ್ಯೋತಿ ಬಸವೇಶ್ವರರು ಬಡ ಭಕ್ತ ಚನ್ನಯ್ಯನ ಮನೆಗೆ ಹೋದಂತೆ ತಾವು ಬಡತನ ಸಿರಿತನ – ಅಧಿಕಾರ ಗಮನಿಸದೇ ಅನ್ಯಾಯ ಅಪಮಾನ ಅನುಭವಿಸುತ್ತಿರುವ ನಮಗೆ ನ್ಯಾಯ ಒದಗಿಸಲು ಬನ್ನಿ – ಧ್ವನಿ ಎತ್ತಿ ,
ಬಡ ಪಂಚಮಸಾಲಿ ಯುವ ನಾಯಕನ ಕೊಲೆ ಮಾಡಿದ ಕಟುಕರು ಕೊಲೆ ಮಾಡಿಸಿದ ರಾಕ್ಷಸರು ಶಿಕ್ಷೆ ಅನುಭವಿಸುವಂತೆ ಶಿವನಲ್ಲಿ ಪ್ರಾರ್ಥಿಸುವಿರೆಂದು ನಂಬುವೆ .
ಅದು ನಮ್ಮ ಪಂಚಮಸಾಲಿ ಪೀಠಕ್ಕೆ ಗೌರವ ತಂದು ಭಕ್ತರ ಮತ್ತು ಒಟ್ಟಾರೆ ಸಮಾಜದ ವಿಶ್ವಾಸವನ್ನು ಮಠ ಮಂದಿರಗಳ ಬಗ್ಗೆ ಹೆಚ್ಚಿಸಬಹುದು . ಪೂಜ್ಯರ ಕೃಪೆ ನಮ್ಮ ಮೇಲೆ ಸ್ವಲ್ಪವಾದರೂ ಇರಲಿ ಎಂದು ಪತ್ರ ಮುಗಿಸಿದ್ದಾರೆ.
ತುಂಗವ್ವ ನಿಂಗನಗೌಡರ್ ಬರೆದಿರುವ ಪತ್ರಕ್ಕೆ ಪುತ್ರ ಗುರುನಾಥಗೌಡ,ತಂಗಿ ಅಕ್ಕಮ್ಮ ಸೇರಿದಂತೆ ಕುಟುಂಬ ಸದಸ್ಯರು ಸಹಿ ಹಾಕಿದ್ದಾರೆ.