ಧಾರವಾಡ prajakiran.com : ಕೊಲೆಯಾದ ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಗೌಡರ ಕೂಡ ಒಬ್ಬ ಪಂಚಮಸಾಲಿ ಸಮುದಾಯದ ಯುವನಾಯಕನಾಗಿದ್ದ.
ಆಗ ಧ್ವನಿ ಎತ್ತದ ಜಯಮೃತ್ಯುಂಜಯ ಸ್ವಾಮೀಜಿ ಈಗೇಕೆ ಇಡೀ ಪಂಚಮಸಾಲಿ ಸಮಯದಾಯವನ್ನು ತೆಗೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಪಂಚಮಸಾಲಿ ಸಮಾಜದ ಮುಖಂಡ ನಾಗನಗೌಡ ನೀರಲಗಿಪಾಟೀಲ ತಿರುಗೇಟು ನೀಡಿದರು.
ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಯಮೃತ್ಯುಂಜಯ ಸ್ವಾಮೀಜಿಗಳು, ಹರಿಹರದ ವಚನಾನಂದ ಸ್ವಾಮಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿ ಅವರು ಇಡೀ ಸಮುದಾಯಕ್ಕೆ ಸ್ವಾಮಿಗಳಾಗಿರದೇ ಕೇವಲ ಒಬ್ಬ ವ್ಯಕ್ತಿಗೆ ಸ್ವಾಮಿಯಾಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.
ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ವಿನಯ ಕುಲಕರ್ಣಿ ಅವರ ಪರವಾಗಿ ಇಡೀ ಪಂಚಮಸಾಲಿ ಹಾಗೂ ಲಿಂಗಾಯತ ಸಮುದಾಯದ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಇದು ಅವರಿಗೆ ಶೋಭೆ ತರುವಂತದ್ದಲ್ಲ ಎಂದಿದ್ದಾರೆ.
ಕೊಲೆಯಾದ ಯೋಗೀಶಗೌಡ ಗೌಡರ ಕೂಡ ಪಂಚಮಸಾಲಿ ಲಿಂಗಾಯತ ಸಮಾಜದ ಯುವ ನಾಯಕನಾಗಿದ್ದ ಎಂಬುದು ಅವರು ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿನಯ್ ಅವರು ಯಾವುದೇ ತಪ್ಪನ್ನು ಮಾಡದೇ ಇದ್ದರೆ, ಎಲ್ಲವನ್ನೂ ಕಾನೂನು ಮೂಲಕ ಎದುರಿಸಿ ಧೈರ್ಯವಾಗಿ ಹೊರಗಡೆ ಬನ್ನಿ ಎಂದು ಸ್ವಾಮೀಜಿಗಳು ಆಶೀರ್ವಾದ ಮಾಡಲಿ.
ಅದನ್ನು ಬಿಟ್ಟು ಇಂತಹ ಪ್ರಕರಣದಲ್ಲಿ ಇಡೀ ಪಂಚಮಸಾಲಿ ಹಾಗೂ ವೀರಶೈವ ಲಿಂಗಾಯತ ಸಮಾಜದ ಸಮುದಾಯದ ಹೆಸರು ಬಳಸಿಕೊಳ್ಳುವುದರಿಂದ ಇದು ಇಡೀ ಸಮುದಾಯಕ್ಕೆ ಕಪ್ಪು ಚುಕ್ಕೆಯಾದಂತಾಗುತ್ತದೆ ಎಂದಿದ್ದಾರೆ.