ಧಾರವಾಡ prajakiran.com :
ಧಾರವಾಡದ ಹೆಡ್ ಕಾನ್ಸಟೇಬಲ್ ಮೇಲೆಯೇ ಹಲ್ಲೆ ಮಾಡಿದ್ದ ರೌಡಿಶೀಟರ್ ಅನಿಲ ಡಾಂಗೆ ಬಂಧನಕ್ಕೆ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ.
ನಿನ್ನೆ ಯಿಂದ ಆತನ ಮೊಬೈಲ್ ನಾಟ್ ರಿಚೇಬಲ್ ಆಗಿದ್ದು, ನಾಪತ್ತೆ ಯಾಗಿರುವ ಆತನ ಪತ್ತೆಗೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಶನಿವಾರ ಬೆಳಗ್ಗೆ ಧಾರವಾಡದ ತೇಜಸ್ವಿನಗರದಲ್ಲಿರುವ ಶ್ರೀ ಸರಸ್ವತಿ ಸೇಲ್ಸ್ ಕಾರ್ಪೋರೇಷನ್ ಹಾರ್ಡ್ ವೇರ್ ಅಂಗಡಿ ಬಂದ್ ಮಾಡಲು ಹೇಳಿದ ಹೆಡ್ ಕಾನ್ಸಟೇಬಲ್ ಅಲ್ತಾಫ್ ಹುಯಿಲಗೋಳ ಮೇಲೆಯೇ ರೌಡಿಶೀಟರ್ ಅನಿಲ ಡಾಂಗೆ ಹಾಗೂ ಆತನ ಮಗ ಸಾಹಿಲ್ ಮತ್ತು ಶಾಂತಕುಮಾರ ಡಾಂಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡುವ ಮೂಲಕ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದರು.
ಇದರಿಂದಾಗಿ ರೌಡಿಶೀಟರ್ ಅನಿಲ ಡಾಂಗೆ ಹಾಗೂ ಆತನ ಪುತ್ರನ ಸಾಹಿಲ್ ಹಾಗೂ ಶಾಂತಕುಮಾರ ಡಾಂಗೆ ವಿರುದ್ದ
ಹೆಡ್ ಕಾನ್ಸಟೇಬಲ್ ಅಲ್ತಾಫ್ ಹುಯಿಲಗೋಳ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತಕ್ಷಣ ಹುಬ್ಬಳ್ಳಿ ಧಾರವಾಡ ಅವಳಿನಗರ ಪೊಲೀಸ್ ಆಯುಕ್ತ ಲಾಬುರಾಮ್ ಅವರು ರೌಡಿಶೀಟರ್ ಡಾಂಗೆ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಆಗ ಕಾರ್ಯಪ್ರವೃತ್ತರಾದ ಧಾರವಾಡದ ವಿದ್ಯಾಗಿರಿ ಪೊಲೀಸರು ರೌಡಿಶೀಟರ್ ಅನಿಲ ಡಾಂಗೆಯ ಪುತ್ರ ಸಾಹಿಲ್ ಡಾಂಗೆಯನ್ನು ಬಂಧಿಸಿ ಜೂನ್ 10ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದೀಗ ಪರಾರಿಯಾಗಿರುವ ರೌಡಿಶೀಟರ್ ಅನಿಲ ಡಾಂಗೆ ಹಾಗೂ ಆತನ ಇನ್ನೊಬ್ಬ ಪುತ್ರ ಶಾಂತಕುಮಾರ ಡಾಂಗೆ ಗಾಗಿ ತಡಕಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಪ್ರಜಾಕಿರಣ.ಕಾಮ್ ಗೆ ಖಚಿತ ಪಡಿಸಿವೆ.