ಧಾರವಾಡ prajakiran.com : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಘಟಕದಲ್ಲಿ ರೆಡ್ ಕ್ರಾಸ್ ಸಂಸ್ಥೆಯವತಿಯಿಂದ ನೌಕರರಿಗೆ ಮಾಸ್ಕ್, ಸ್ಯಾನಿಟೈಸರ್, ಆರೋಗ್ಯ ಪೇಯ ಮತ್ತು ಸಾಬೂನು ಗಳನ್ನು ಸೋಮವಾರ ವಿತರಣೆ ಮಾಡಲಾಯಿತು.
ಚಾಲನೆ ನೀಡಿ ಮಾತನಾಡಿದ ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಕರೊನಾ ಕಾಯಿಲೆಯ ಹರಡುವಿಕೆ ಸರ್ವವ್ಯಾಪಿಯಾಗಿದ್ದು. ದೈನಂದಿನ ಕರ್ತವ್ಯದಲ್ಲಿ ಸಾಮಾಜಿಕ ಸುರಕ್ಷತೆ ಕಾಯ್ದುಕೊಳ್ಳುವ ಅಗತ್ಯವಿದೆ’ ಎಂದು ಹೇಳಿದರು.
ಕೊರೊನಾ ತಡೆಗಟ್ಟುವ ಸಲುವಾಗಿ ಎಲ್ಲ ಕ್ಷೇತ್ರದಲ್ಲಿನ ಉದ್ಯೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ಆಧ್ಯತೆ ನೀಡುವ ಸವಾಲು ಎದುರಾಗಿದೆ. ಅದೇ ರೀತಿ ಸದಾ ಸಾರ್ವಜನಿಕರ ಮಧ್ಯೆ ಕರ್ತವ್ಯ ನಿರ್ವಹಿಸುವ ಸಾರಿಗೆ ಸಂಸ್ಥೆಯ ನೌಕರರ ಆರೋಗ್ಯ ಕಾಪಾಡುವ ಜವಾಬ್ದಾರಿ ಸಂಸ್ಥೆಯದ್ದಾಗಿದೆ.
ಅನ್ಯ ರಾಜ್ಯಗಳಿಂದ ಕಾರ್ಮಿಕರನ್ನು ಕರೆ ತರುವುದು ಮತ್ತು ಬೇರೆ ರಾಜ್ಯಗಳಿಗೆ ಕಳಿಸುವ ಕೆಲಸದಲ್ಲಿ ನೌಕರರು ತೋರಿಸಿದ ಸೇವೆ ಶ್ಲಾಘನೀಯ. ಈ ಹಂತದಲ್ಲಿ ಸಂಸ್ಥೆಯ ನೌಕರರ ಆರೋಗ್ಯ ಪ್ರಮುಖವಾಗಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ರಕ್ಷಣೆಗೆ ಅವಶ್ಯವಿರುವ ಎಲ್ಲ ಸಲಕರಣೆಗಳನ್ನು ಸಂಸ್ಥೆ ನೀಡಲಿದ್ದು, ನೌಕರರು ಯಾವುದೇ ಹಂತದಲ್ಲಿ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.
ಸಂಸ್ಥೆಯ ನೌಕರರಿಗೆ ಆರೋಗ್ಯ ರಕ್ಷಣೆಯ ಸಲಕರಣೆಗಳನ್ನು ನೀಡಿದ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಚೋಳನ್, ನೌಕರರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಕವನ ದೇಶಪಾಂಡೆ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಉಮೇಶ ಹಳ್ಳಿಕೇರಿ, ಸಂಸ್ಥೆಯ ಪ್ರಭಾರಿ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ರಾಧಾಕೃಷ್ಣ, ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.