ಬೆಂಗಳೂರು prajakiran.com : ಕರೋನಾ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಈ ಹಿಂದೆ ರಾಜ್ಯ ಸರಕಾರ ಹೊರಡಿಸಿದ್ದ ಭಾನುವಾರದ ಲಾಕ್ ಡೌನ್ ಮತ್ತೇ ಮುಂದಿನ ಮೂರು ವಾರ ಮುಂದುವರೆಸಲಾಗುವುದು ಎಂದು ಕಂದಾಯ ಸಚಿವ ಆರ್ .ಅಶೋಕ್ ತಿಳಿಸಿದ್ದಾರೆ.
ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಆ ಮೂಲಕ ಆಗಸ್ಟ್ ತಿಂಗಳಲ್ಲಿ ಭಾನುವಾರದ ಕರ್ಫ್ಯೂ ಸೆಕ್ಷನ್ 144 ಕಲಂ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇದರಿಂದಾಗಿ ಮುಂದಿನ ಮೂರು ಭಾನುವಾರ ಕೂಡ ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ, ಸಮಾರಂಭಗಳನ್ನು ಜರುಗಿಸುವುದನ್ನು ನಿಷೇಧಿಸಿದಂತಾಗಿದೆ.
ರಾಜ್ಯಾದ್ಯಂತ ಭಾನುವಾರ 5 ಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಅನಗತ್ಯವಾಗಿ ತಿರುಗಾಡುವುದನ್ನು ನಿಷೇಧಿಸಲಾಗಿದೆ.
ಶವ ಸಂಸ್ಕಾರಕ್ಕೆ ಇಪ್ಪತ್ತು ಜನರಿಗೆ ಮಾತ್ರಅವಕಾಶ ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳ ಸೇವೆಗಳಿಗೆ, ಹೋಟೆಲ್ ಪಾರ್ಸಲ್, ಕೋವಿಡ್ ಕೆಲಸಕ್ಕೆ ನಿಯೋಜಿತಗೊಂಡ ಸರಕಾರಿ ಅಧಿಕಾರಿಗಳಿಗೆ ಇದು ಅನ್ವಯಿಸುವುದಿಲ್ಲ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಕಂದಾಯ ಸಚಿವರು ಎಚ್ಚರಿಸಿದ್ದಾರೆ.