ಹಾವೇರಿ prajakiran.com: ರಾಣೆಬೆನ್ನೂರ ತಾಲೂಕಿನ ದೇವರಗುಡ್ಡದ ಕರಿಯಾಲದಲ್ಲಿ ವಿಜಯದಶಮಿ ಪ್ರಯುಕ್ತ ಶನಿವಾರ ಸಂಜೆ ನಡೆದ ಕಾರ್ಣಿಕ ರಾಷ್ಟ್ರದ ಜನರಿಗೆ ನೆಮ್ಮದಿ ಹಾಗೂ ಖುಷಿ ಕೊಡಲಿದೆ.
ಹೌದು ಇದು ಅಚ್ಚರಿ ಆದ್ರೂ ಸತ್ಯ.
ಅದೇನಪ್ಪ ಅಂತಿರಾ.
ಅದು ಹೀಗಿದೆ. ವ್ಯಾದಿ ಬೂದಿ ಆದಿತಲೆ ಸೃಷ್ಟಿ ಸಿರಿ ಆದಿತಲೇ ಪರಾಕ್ ಅಂತ ದೇವರಗುಡ್ಡ ಗ್ರಾಮದ ಗೊರವಯ್ಯ ಕಾರ್ಣಿಕ ನುಡಿದರು.
ಈ ಕಾರ್ಣಿಕದ ನುಡಿಯನ್ನು ಆ ಬಳಿಕ ವಿಶ್ಲೇಷಿಸುವುದು ವಾಡಿಕೆ. ಅದರ ಪ್ರಕಾರ ಈ ಕಾರ್ಣಿಕವನ್ನು ಎಲ್ಲರಿಗೂ ಒಳಿತಾಗುವ ಧನಾತ್ಮಕ ನುಡಿ ಎಂದು ವಿಶ್ಲೇಷಿಸಲಾಗಿದೆ.
ವ್ಯಾದಿ ಬೂದಿ ಯಾಗುವುದು ಎಂದರೆ ಜಗತ್ತಿಗೆ ಮಹಾಮಾರಿ ಯಾಗಿ ಕಾಡುತ್ತಿರುವ ಕೊರೊನಾ ಸೊಂಕು ನಿರ್ನಾಮ ವಾಗುವುದು ಎಂತಲೂ ಸೃಷ್ಟಿ ಸಿರಿ ಆದಿತಲೆ ಎಂದರೆ ಜಗತ್ತು ಸಹಜ ಸ್ಥಿತಿಗೆ ಮರಳಿ ಕೆಲಸ ಕಾರ್ಯಗಳು ವೃದ್ದಿಯಾಗಲಿವೆ ಎಂದು ವಿಶ್ಲೇಷಿಸಬಹುದು.
ಈ ಭಾಗದಲ್ಲಿ ಎರಡು ಬಾರಿ ಕಾರ್ಣಿಕ ನುಡಿಯಲಾಗುತ್ತದೆ. ಭಾರತ ಹುಣ್ಣಿಮೆಯಂದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಸುಕ್ಷೇತ್ರ ಮೈಲಾರ
ಮತ್ತು ವಿಜಯ ದಶಮಿ ನವರಾತ್ರಿ ದಸರಾ ಹಬ್ಬದಲ್ಲಿ ರಾಣೆಬೆನ್ನೂರ ತಾಲ್ಲೂಕಿನ ದೇವರಗುಡ್ಡದಲ್ಲಿ ಕಾರ್ಣಿಕ ನುಡಿಯುತ್ತಿದ್ದು, ಲಕ್ಷಾಂತರ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಬಂದು ಪ್ರಾರ್ಥಿಸುತ್ತಾರೆ.
ಸರಕಾರದ ಆದೇಶದಂತೆ ಕೊರೊನಾ ನಿಯಮಗಳನ್ನು ಅನುಸರಿಸಲಾಗಿತ್ತು.
ಕಾರ್ಣಿಕದ ಅಜ್ಜ:
ಕಾರ್ಣಿಕ ನುಡಿಯುವ ಗೊರವಯ್ಯ ಅವರನ್ನು ಅಜ್ಜನವರು ಎಂದೇ ಸಂಬೋಧಿಸುತ್ತಾರೆ.
ಅವರು 9 ದಿನಗಳವರೆಗೆ ಹಾಲು ಮತ್ತು ಹಣ್ಣುಗಳನ್ನು ಮಾತ್ರ ಸೇವಿಸಿ ಉಪವಾಸ ವೃತ ಆಚರಿಸುತ್ತಾರೆ. ಕಾರ್ಣಿಕದ ದಿನದಂದು ಅಂದಾಜು 25 ಅಡಿ ಎತ್ತರದ ಬಿಲ್ಲನ್ನೇರಿ, ಸುತ್ತಲೂ ನೋಡಿ ಜನಸಾಗರದ ಮಧ್ಯೆ ಕಾರ್ಣಿಕ ನುಡಿದು, ಕೆಳಗೆ ಬೀಳುವುದು ವಾಡಿಕೆ.
ಕಾರ್ಣಿಕದ ನುಡಿಯನ್ನು ಮಳೆ -ಬೆಳೆ, ರೈತ, ಸಮಾಜ, ರಾಜಕೀಯ ಮತ್ತಿತರ ಆಯಾಮಗಳ ಮೇಲೆ ವಿಶ್ಲೇಷಿಸಲಾಗುತ್ತದೆ.
ಈ ಬಾರಿಯ ನುಡಿಯು ಜನತೆಗೆ ಖುಷಿ ನೀಡಿದೆ. ಎಂದರೆ ತಪ್ಪಾಗಲಾರದು.