*ಧಾರವಾಡ ರೈಲ್ವೆ ಬ್ರಿಜ್ ಮೇಲೆ ಪಾದಚಾರಿಗಳಿಗೆ ಪುಂಡರ ಕಾಟ*
*ಮಂಗಳೂರು ಮೂಲದ ಯುವಕನ ಮೇಲೆ ಧಾರವಾಡ ಪುಂಡರ ದಾಳಿ*
*ಬೆಚ್ಚಿಬಿದ್ದ ಯುವಕನ ಪೋಷಕರು ಪೊಲೀಸರ ಮೊರೆ ಹೋದರೂ ಪ್ರಯೋಜನವಾಗಿಲ್ಲ*
*ಧಾರವಾಡ ರೈಲು ನಿಲ್ದಾಣ ತಲುಪಲು ಪ್ರಯಾಣಿಕರ ನಿತ್ಯ ಪರದಾಟ*
*”ಅಭಿಮಾನ”ದಲ್ಲಿ ಕುಡಿದು ದುರಾಭಿಮಾನ ಮೆರೆಯುವುದು ಸರ್ವೆಸಾಮಾನ್ಯ*
*112 ಪೊಲೀಸರ ಕಂಡು ಎದ್ದ್ನೊ ಬಿದ್ನೋ ಅಂತ ಓಡಿದ ಪುಂಡರು*
*ದಿನನಿತ್ಯ ಕಾಡುವ ಪುಂಡರ ಹಾವಳಿಗೆ ಕಡಿವಾಣ ಹಾಕುವರು ಯಾರು*
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ರೈಲ್ವೆ ನಿಲ್ದಾಣ ಬಳಿಯ ಕಲ್ಯಾಣ ನಗರಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ರೈಲ್ವೆ ಗೇಟ್ ಬಳಿ ಈ ಹಿಂದಿನಂತೆ ಆಗುತ್ತಿದ್ದ ಗಲಾಟೆಗಳು ಇದೀಗ ಹೊಸ ಬ್ರಿಜ್ ಮೇಲೆ ಮುಂದುವರೆದಿವೆ.
ಇದಕ್ಕೆ ಕಾರಣ ಅಲ್ಲಿಯೇ ದಶಕಗಳಿಂದ ನೆಲೆ ನಿಂತಿರುವ ಮದ್ಯಪ್ರಿಯರ ಹಳೇಯ “ಅಭಿಮಾನ” ಬಾರ್.
ಯಾರಾದರೂ ಹೊಸ ಪ್ರಯಾಣಿಕರು, ಹೊರ ಊರಿನ ಯುವಕರು, ಹಿರಿಯ ನಾಗರಿಕರು ಹಾಗೂ ಅವರ ಕುಟುಂಬದ ಸದಸ್ಯರು ರೈಲು ನಿಲ್ದಾಣಕ್ಕೆ ಪಾದಚಾರಿ ಮಾರ್ಗದಲ್ಲಿ ತಲುಪಲು ಹೋದರೆ ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.
ಇದಕ್ಕೆ ನಿನ್ನೆ ಶನಿವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ನಡೆದ ಗಲಾಟೆ ಸ್ಪಷ್ಟ ನಿರ್ದಶನ.
ಹೌದು ಮಂಗಳೂರು ಮೂಲದ ಯುವಕ ರೈಲು ನಿಲ್ದಾಣಕ್ಕೆ ಹೊಸ ರೈಲ್ವೆ ಬ್ರಿಜ್ ಮೇಲೆ ನಡೆದುಕೊಂಡು ಹೋಗುವಾಗ ಅಲ್ಲಿಯೇ ಅಭಿಮಾನದಲ್ಲಿ ಕುಡಿದು ನಿಂತಿದ್ದ ಪುಂಡರ ತಂಡ ದುರಾಭಿಮಾನ ಮೆರೆದಿದೆ.
ಆತನ ಮೇಲೆ ಬೀರ್ ಬಾಟಲಿಯಿಂದ ಹಾಗೂ ಮನಬಂದಂತೆ ಥಳಿಸಿದ್ದಾರೆ.
ಆತ ತನ್ನ ಮೇಲೆ ಹಲ್ಲೆಯಾಗುತ್ತಿದ್ದಂತೆ ತಮ್ಮ ಸಂಬಂಧಿಕರನ್ನು ಸಂಪರ್ಕ ಮಾಡಿ ಬೆಂಗಳೂರು ಪ್ರಯಾಣಿಸಿದ್ದಾನೆ.
ಘಟನಾ ಸ್ಥಳಕ್ಕೆ ಆಗಮಿಸುವಂತೆ 112 ಪೊಲೀಸರ ಮೊರೆ ಹೋದ ಪೋಷಕರು ಗಸ್ತು ವಾಹನ ಸ್ಥಳಕ್ಕೆ ಬರುವವರೆಗೆ ಅಲ್ಲಿಯೇ ಕಾಯ್ದಿದ್ದಾರೆ.
ಬಳಿಕ ಪುಂಡರು ಪೊಲೀಸರು ಕಂಡು ಎದ್ನೋ ಬಿದ್ನೋ ಅಂತ ಅಲ್ಲಿಂದ ಕಾಲು ಕಿತ್ತಿದ್ದಾರೆ.
ಕುಡಿದ ಮತ್ತಿನಲ್ಲಿ ದಿನನಿತ್ಯ ರೌಡಿಸಂ ಮಾಡುವ ಈ “ಅಭಿಮಾನ” ಪುಂಡರಿಗೆ ಕಡಿವಾಣ ಹಾಕುವರು ಯಾರು ಎಂಬ ಪ್ರಶ್ನೆ ಅಲ್ಲಿಯ ನಾಗರಿಕರಿಗೆ ಕಾಡುತ್ತಿದೆ.
ಕಳೆದ ಹಲವು ವರ್ಷಗಳಿಂದ ಅಪರಾಧಗಳ ಕೃತ್ಯಗಳ ಅಡ್ಡೆಯಾಗಿರುವ ರೈಲ್ವೆಯ ಬ್ರಿಜ್ ಬಳಿಯ ಬಾರ್ ವೊಂದರ ಗಲಾಟೆಗೆ ಹುಬ್ಬಳ್ಳಿ ಧಾರವಾಡ ಪೊಲೀಸರು ಯಾವಾಗ ಮುಕ್ತಿ ಹಾಡುತ್ತಾರೆ ಎಂಬುದು ಇಂದಿಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಇದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕು.