ಧಾರವಾಡ prajakiran.com : ಕೋವಿಡ್ ತಪಾಣೆಗಾಗಿ ಧಾರವಾಡ ಜಿಲ್ಲೆಗೆ ಒಟ್ಟು ೨,೩೦೦ ಆ್ಯಂಟಿಜೆನ್ ಕಿಟ್ ಪೂರೈಕೆಯಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗದಲ್ಲಿ ಸೋಮವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಆ್ಯಂಟಿಜನ್ ಪರೀಕ್ಷೆ ವಾಹನಕ್ಕೆ ಚಾಲನೆ ನೀಡಿದರು.
ಆ್ಯಂಟಿಜೆನ್ ಕಿಟ್ ಹೊಂದಿರುವ ವಾಹನ ಆಸ್ಪತ್ರೆ ಬಳಿ ಇದ್ದು, ಅಲ್ಲಿಗೆ ಆಗಮಿಸುವ ಕೋವಿಡ್-೧೯ ಲಕ್ಷಣ ಹೊಂದಿರುವ ಜನರಿಂದ ಸ್ಥಳದಲ್ಲಿಯೇ ರಕ್ತ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅರ್ಧ ಗಂಟೆಯಲ್ಲಿ ಫಲಿತಾಂಶ ತಿಳಿಯಲಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದೀನಕರ, ಡಾ.ಸುಜಾತಾ ಹಸವಿಮಠ ಸೇರಿದಂತೆ ಇತರರು ಇದ್ದರು.
ಕಡ್ಡಾಯವಾಗಿ ಮಾಸ್ಕ್ ಬಳಸಲು ಜಿಲ್ಲಾಧಿಕಾರಿ ಸೂಚನೆ
ಕೋವಿಡ್ ನಿಯಂತ್ರಣಕ್ಕೆ ಸಾಮಾಜಿಕ ಅಂತರದ ನಿಯಮ ಪಾಲನೆ, ಪ್ರತಿಯೊಬ್ಬರು ಮಾಸ್ಕ್ ಬಳಸುವುದು ಹಾಗೂ ಸ್ಯಾನಿಟೈಸರ್ ಉಪಯೋಗಿಸುವುದು ಕಡ್ಡಾಯವಾಗಿದೆ.
ಜಿಲ್ಲೆಯ ಎಲ್ಲ ವ್ಯಾಪಾರಸ್ಥರು, ಪೆಟ್ರೊಲ್ ಬಂಕ್ಗಳು ಇದನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದ್ದಾರೆ.
ಜಿಲ್ಲೆಯಾದ್ಯಂತ ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳು, ಹಣ್ಣು, ತರಕಾರಿ, ದಿನಸಿ ವರ್ತಕರು, ಪೆಟ್ರೋಲ್ ಬಂಕ್ಗಳು ತಮ್ಮ ವ್ಯವಹಾರ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು.
ಗ್ರಾಹಕರು ಸರದಿ ಸಾಲಿನಲ್ಲಿ ನಿಂತುಕೊಳ್ಳುವುದನ್ನು ನಿರ್ದೇಶಿಸಬೇಕು. ಅಂಗಡಿಯ ಪ್ರವೇಶದಲ್ಲಿ ಸ್ಯಾನಿಟೈಸರ್ ಇಟ್ಟು ಗ್ರಾಹಕರಿಗೆ ನೀಡಬೇಕು.
ಈ ನಿಯಮ ಪಾಲಿಸಲು ಜಿಲ್ಲೆಯ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ವ್ಯಾಪಾರಸ್ಥರೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.