ಕಾರವಾರ prajakiran.com : ನವಜಾತ ಹೆಣ್ಣು ಶಿಶುವನ್ನ ಅಕ್ರಮವಾಗಿ
ಮಾರಾಟ ಮಾಡಿದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಅಲ್ಲದೆ, ಅದನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗಿದೆ. ಆದರೆ,
ಈ ಪ್ರಕರಣದಲ್ಲಿ ಭಾಗಿಯಾದ ಐದು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಡಿಪಿಓ ಡಾ.ಲಕ್ಷ್ಮೀದೇವಿ ಎಸ್ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.
ಆರು ದಿನಗಳ ಹಿಂದೆ ಜನಿಸಿದ ನವಜಾತ ಶಿಶುವಿನ ಲಾಲನೆ ಪಾಲನೆ ಮಾಡಲು ನನ್ನ ಕೈಯಿಂದ ಸಾಧ್ಯವಿಲ್ಲ ಎಂದು ತಾಯಿಯೇ 25 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಹಳಿಯಾಳ ತಾಲೂಕಿನ ತಟ್ಟಿಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗೌಳಿವಾಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗೌಳಿವಾಡಾ ಗ್ರಾಮದ ಸಾವಿತ್ರಿ ದೊಂಡು ಡೊಯಿಪಡೆ (26) ಎಂಬಾಕೆಯೇ ದಿ.20 ರಂದು ತಾಲೂಕಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಾಳೆ.
ಇದಾದ ನಂತರ ದಿ. 22 ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿ ಗ್ರಾಮಕ್ಕೆ ಮರಳುತ್ತಿರುವ ಸಂದರ್ಭದಲ್ಲಿ ತಾಲೂಕಿನ ಕೆಸರೊಳ್ಳಿ ಕ್ರಾಸ್ ಬಳಿ 25 ಸಾವಿರ ರೂಪಾಯಿಗಳಿಗೆ ಯಲ್ಲಾಪುರ ತಾಲೂಕಿನ ಕಿರುವತ್ತಿ ಗ್ರಾಮದ ರಾಹತ ಪಟೇಲ್ ಹಾಗೂ ಅಬ್ದುಲ್ ರಹಿಮಾನ್ ಪಟೇಲ್ ದಂಪತಿಗೆ ಮಾರಾಟ ಮಾಡಿದ್ದಾಳೆ.
ಮಗುವಿನ ಕುರಿತು ಮೇಲ್ವಿಚಾರಣೆ ಮಾಡಲೆಂದು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ನವಜಾತ ಶಿಶುವಿನ ಮನೆಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ತಕ್ಷಣವೇ ಕಾರ್ಯಕರ್ತೆಯರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
ಆನಂತರ ಘಟನಾ ಸ್ಥಳಕ್ಕೆ ಸಿಡಿಪಿಓ ಡಾ.ಲಕ್ಷ್ಮೀದೇವಿ, ಪಿಎಸೈ ಶಿವಾನಂದ ನಾವದಗಿ, ಪಿಡಿಓ ಮಹಾಂತೇಶ ಹುರಕಡ್ಡಿ, ಹಾಗೂ ಅವರ ತಂಡ ತೆರಳಿ ವಿಚಾರಣೆ ನಡೆಸಿದಾಗ ಮಗು ಮಾರಾಟವಾದ ವಿಷಯ ಹೊರಬಿದ್ದಿದೆ.
ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಯಲ್ಲಾಪುರಕ್ಕೆ ತೆರಳಿ ನವಜಾತ ಶಿಶುವನ್ನು ರಕ್ಷಿಸಿದ್ದಾರೆ.
ಮಗುವನ್ನು ಅಕ್ರಮ ಹಾಗೂ ಅನೈತಿಕ ಸಾಗಾಣಿಕೆ ಮಾಡಲು ಸಹಾಯ ಮಾಡಿದ ಸಂತ್ರಸ್ತೆಯ ಅಣ್ಣ ಭಯ್ಯಾಜಾನು ಪಟಕಾರೆ ಹಾಗೂ ಅಗಸಲಕಟ್ಟಾ ಗ್ರಾಮದ ಆಶಾ ಕಾರ್ಯಕರ್ತೆ ರೋಜಿ ಲೂಯಿಸ್ ದಬಾಲಿ ಸಹಕರಿಸಿದ ಮಮತಾಜ ಸರ್ದಾರ ಹಳಬ ಹಾಗೂ ಮಾರಾಟದ ಮೂಲಕ ಶಿಶುವನ್ನು ಪಡೆದ ರಾಹತ ಪಟೇಲ್ ಹಾಗೂ ಅಬ್ದುಲ್ ರಹಿಮಾನ್ ಪಟೇಲ್ ದಂಪತಿಗಳ ವಿರುದ್ಧಸೂಕ್ತ ಕ್ರಮ ಕೈಗೊಳ್ಳುವಂತೆ ಡಾ.ಲಕ್ಷ್ಮೀದೇವಿ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.