ಧಾರವಾಡ ಪ್ರಜಾಕಿರಣ.ಕಾಮ್ : ಇಲ್ಲಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ನಿವೃತ್ತ ವಿಶೇಷ ಭೂಸ್ವಾಧೀನ ಅಧಿಕಾರಿ ವಸಂತಕುಮಾರ ಡಿ. ಸಜ್ಜನ, ಹಿರಿಯ ಸಹಾಯಕ (ಪ್ರಧಾನ ವ್ಯವಸ್ಥಾಪಕ)ಶಂಕರ ತಳವಾರ ಹಾಗೂ ವ್ಯವಸ್ಥಾಪಕ (ಶಿರಸ್ತೆದಾರ) ಎಂ.ಕೆ. ಸಿಂಪಿ ಸೇರಿದಂತೆ ಇತರರ ವಿರುದ್ಧ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಗುರುವಾರ ಧಾರವಾಡ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಪ್ಪಿ ಅವರಿಗೆ ದೂರು ಸಲ್ಲಿಸಲಾಯಿತು.
ಧಾರವಾಡದ ಹತ್ತು ಹಲವು ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ
21 ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ಮಾಡಿರುವ ಕುರಿತು ಮಹತ್ತರ ದಾಖಲೆಗಳನ್ನು ತನಿಖೆ ನಡೆಸಲು ಸಲ್ಲಿಸಲಾಯಿತು.
ಈ ವೇಳೆ ಚಿಕ್ಕಮಲ್ಲಿಗವಾಡ ಗ್ರಾಮದ ರೈತ ಶಿವನಗೌಡ ರಾಮನಾಯ್ಕ ಪಾಟೀಲ್ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಐಡಿಬಿಐ ಬ್ಯಾಂಕ್ ಉಣಕಲ್ ಶಾಖೆಯಲ್ಲಿ 5 ಕೋಟಿಗೂ ಅಧಿಕ ಹಣವನ್ನು ಎರಡನೇ ಬಾರಿ ಪಡೆದು ಖೊಟ್ಟಿ ಸಹಿ ಮಾಡಿರುವ ಹಾಗೂ ನಕಲಿ ಬಾಂಡ್ ತಯಾರಿಸಿರುವ ಕುರಿತು ಮಾಹಿತಿ ಲೋಕಾಯುಕ್ತರ ಗಮನ ಸೆಳೆಯಲಾಯಿತು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ನಡೆದಿರುವ ನೂರಾರು ಕೋಟಿ ಅಕ್ರಮ ಪೈಕಿ ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ 21 ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ನಡೆದ ಬಗ್ಗೆ ಲೋಕಾಯುಕ್ತರಿಗೆ ಮಾಹಿತಿ ನೀಡಲಾಯಿತು.
ರೈತರ ಹೆಸರಿನ ನಕಲಿ ಬ್ಯಾಂಕ್ ಖಾತೆಗೆ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ನಡೆಸಿದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಹಿಂದೆ ಕೆ ಐ ಎ ಡಿ ಬಿ ಇಲಾಖೆ ವಿಚಾರಣೆ ನಡೆಸಲು ಬಂದ 9 ಜನ ಅಧಿಕಾರಿಗಳ ತಂಡದಲ್ಲಿ ಒಬ್ಬರು ಶಾಮಿಲಾದ ಅಧಿಕಾರಿ ಸಹ ಇದ್ದರೂ ಎಂಬ ಮಾಹಿತಿಯಿದೆ.
ಹೀಗಾಗಿ ಕೆಐಎಡಿಬಿಯ ಯಾವುದೇ ಭ್ರಷ್ಟ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಬಚಾವ್ ಮಾಡುವ ಕೆಲಸ ಆಗಬಾರದು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಸರಕಾರದ ಬೊಕ್ಕಸಕ್ಕೆ ಆದ ನಷ್ಟ ವಸೂಲಿ ಮಾಡುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಿಕ್ಕಮಲ್ಲಿಗವಾಡ ಗ್ರಾಮದ ರೈತ ಶಿವನಗೌಡ ರಾಮನಾಯ್ಕ ಪಾಟೀಲ್, ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಸದಸ್ಯರಾದ ಮಿಥುನ ಜಾಧವ, ನ್ಯಾಯವಾದಿ ಐ.ಕೆ. ಧರಣಗೌಡರ, ರೈತ ಮುಖಂಡ ಗುರು ಅಂಗಡಿ,
ಶಿವಕುಮಾರ್ ದೇವರಮನಿ ನವೀನ್ ಪ್ಯಾಟಿ ಉಪಸ್ಥಿತರಿದ್ದರು.