ಬೆಂಗಳೂರು prajakiran.com, ಮೇ 7:
ಕರ್ನಾಟಕ ರಾಜ್ಯವು ವಿದೇಶಿ ಬಂಡವಾಳ ಹೂಡಿಕೆ ಹಾಗೂ ಸ್ಥಳೀಯ ಹೂಡಿಕೆಯಲ್ಲಿ ಮುಂಚೂಣಿಯನ್ನು ಕಾಯ್ದುಕೊಳ್ಳಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅವರು ಇಂದು ಟೊಯೊಟಾ ಕಂಪೆನಿಯ 4800 ಕೋಟಿ ರೂ. ಹೂಡಿಕೆಗೆ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಸಹಿ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಕರ್ನಾಟಕ ರಾಜ್ಯ ವಿವಿಧ ವಲಯಗಳಲ್ಲಿ ಹೂಡಿಕೆಗೆ ಪ್ರಶಸ್ತ ತಾಣವಾಗಿ ರೂಪಿಸಲು ನಮ್ಮ ಸರ್ಕಾರ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಉತ್ಪಾದನೆ, ಸೇವಾ ವಲಯ, ಐಟಿ, ಬಿಟಿ, ಎಲೆಕ್ಟ್ರಾನಿಕ್ಸ್ ಸೆಮಿ ಕಂಡಕ್ಟರ್, ವಿದ್ಯುತ್ ವಾಹನಗಳು ಹೀಗೆ ವಿವಿಧ ವಲಯಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿದೆ.
ರಾಜ್ಯದಲ್ಲಿ ವಿವಿಧ ಹೂಡಿಕೆದಾರರೊಂದಿಗಿನ ಒಪ್ಪಂದದ ಕಾರ್ಯಕ್ರಮ ನಿಯಮಿತವಾಗಿ ನಡೆಯುತ್ತಿದೆ. ಕಳೆದ ವಾರ ಸೆಮಿ-ಕಂಡಕ್ಟರ್ ವಲಯದಲ್ಲಿ ಬೃಹತ್ ಒಪ್ಪಂದ ಸಹಿ ಮಾಡಲಾಯಿತು.
ಇದೀಗ ಟೊಯೊಟಾ ದೊಂದಿಗಿನ ಒಪ್ಪಂದ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ವಿದ್ಯುತ್ ವಾಹನಗಳ ತಯಾರಿಕೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಟೊಯೊಟಾದೊಂದಿಗೆ ಒಪ್ಪಂದ:
ರಾಜ್ಯವು ತಂತ್ರಜ್ಞಾನ ಹಾಗೂ ಹೂಡಿಕೆ ಎರಡರಲ್ಲೂ ಭಾರಿ ಮುನ್ನಡೆ ಸಾಧಿಸುತ್ತಿದೆ. ಟೊಯೊಟಾ ದಂತಹ ಪ್ರತಿಷ್ಠಿತ ಕಂಪೆನಿ ಪುನಃ ಪುನಃ ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿರುವುದು ರಾಜ್ಯವು ಹೂಡಿಕೆಗೆ ಹಾಗೂ ದೀರ್ಘಾವಧಿಯ ವ್ಯಾವಹಾರಿಕ ಬಾಂಧವ್ಯ ಹೊಂದಲು ಪ್ರಶಸ್ತ ತಾಣ ಎಂಬುದನ್ನು ಜಗತ್ತಿಗೇ ಸಾರುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.