- ಬಿಜೆಪಿ ಮುಖಂಡನ ಮಾಲೀಕತ್ವದ ಏಜೆನ್ಸಿ ಶಾಮೀಲು
- ಸಮಗ್ರ ತನಿಖೆಗೆ ಪಿ.ಎಚ್. ನೀರಲಕೇರಿ
ಧಾರವಾಡ prajakiran.com : ಧಾರವಾಡ ಜಿಲ್ಲೆಗೆ ಕೋವಿಡ್ 19 ಸಂಬಂಧಿಸಿದಂತೆ ವೈದ್ಯಕೀಯ ಸಿಬ್ಬಂದಿ ಮತ್ತು ಸಾರ್ವಜನಿಕರ ಚಿಕಿತ್ಸೆಗೆ ಅಗತ್ಯವಿರುವ ಪಿಪಿಇ ಕಿಟ್ ಹಾಗೂ ಇನ್ನಿತರ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿನ ವ್ಯವಹಾರವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಒತ್ತಾಯಿಸಿದ್ದಾರೆ.
ಸಲಕರಣೆಗಳ ಖರೀದಿಯಲ್ಲಿನ ಕೋಟ್ಯಾಂತರ ರೂಪಾಯಿ ಗೋಲ್ ಮಾಲ್ ನಡೆದಿರುವ ಕುರಿತು ಪತ್ರಿಕೆಯೊಂದರಲ್ಲಿ ಸಮಗ್ರ ವರದಿಯಾಗಿದ್ದು, ನಾವು ಈ ಹಿಂದೆ ಮಾಡಿದ್ದ ಆರೋಪಕ್ಕೆ ಇದು ಪುಷ್ಠಿ ನೀಡಿದಂತಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮುಖಂಡನ ಮಾಲೀಕತ್ವದ ಏಜೆನ್ಸಿಯ ಮೂಲಕ ಖರೀದಿ ನಡೆದಿರುವುದು ಈ ಅವ್ಯವಹರಕ್ಕೆ ಅನುಮಾನ ಎಡೆಮಾಡಿಕೊಟ್ಟಿದೆ.
ಈ ಹಿಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ರ ಅವಧಿಯಲ್ಲಿ ಈ ಅವ್ಯವಹಾರ ನಡೆದಿರುವುದು ಈಗ ಬಯಲಿಗೆ ಬಂದಿದೆ. ಜನ ಕೋವಿಡ್-೧೯ ರ ಭೀತಿಯಿಂದ ಸಂಕಷ್ಟದಲ್ಲಿರುವ ಸಮಯದಲ್ಲಿ ಹಣ ಲೂಟಿ ಮಾಡುತ್ತಿರುವುದು ಮಾನವೀಯತೆ ಇಲ್ಲ ಎಂಬುದಕ್ಕೆ ನಿದರ್ಶನವಾಗಿದೆ ಎಂದು ಟೀಕಿಸಿದ್ದಾರೆ.
ಇದಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರೇ ಹೊಣೆಯಾಗಿದ್ದು, ಸಚಿವರಿಗೆ ಜನರ ಬಗ್ಗೆ ಕಿಂಚಿತ್ತು ಕಾಳಜಿಯಿದ್ದರೆ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.
ಇಲ್ಲದಿದ್ದರೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಜನರಿಗೆ ನಿಜಾಂಶ ತಿಳಿಸಬೇಕುಎಂದು ಸವಾಲು ಹಾಕಿದ್ದಾರೆ.
ಆಡಳಿತರೂಢ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಮುಖಂಡರ ಮಾಲೀಕತ್ವದ ಏಜೆನ್ಸಿ ಮೂಲಕ ವಸ್ತುಗಳನ್ನು ಪೂರೈಸಿದ್ದಾರೆ.
ಅದು ಸೇವೆಯ ಹೆಸರಿನಲ್ಲಿ ದುಪ್ಪಟ್ಟು ದರದಲ್ಲಿ ಪೂರೈಸಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.
ಇನ್ನೂ ಅಚ್ಚರಿಯ ಹಾಗೂ ದುರಂತದ ಸಂಗತಿಯೆಂದರೆ ಈ ಪಿಪಿಇ ಕಿಟ್ ಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನೆ ಪರಿಷತ್ತು ಅನುಮೋದನೆ ಇಲ್ಲ.ಅಂತಹ ವಸ್ತುಗಳಿಗೆ ದುಪ್ಪಟ್ಟು ಬೆಲೆ ನೀಡುವುದು ಸಮಂಜಸವೇ ಎಂಬ ಪ್ರಶ್ನೆ ಎದುರಾಗಿದೆ.
ರಾಜ್ಯ ಸರಕಾರ ಕೂಡ ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ ಎಂದು ಈ ಹಿಂದೆ ನಾವು ಆರೋಪಿಸಿದ್ದರಲ್ಲಿ ಸತ್ಯವಿದೆ.
ಜನರು ಜೀವ ಭಯದಲ್ಲಿ ಬದುಕುತ್ತಿರುವಾಗ ರಾಜ್ಯದಲ್ಲಿನ ಬಿಜೆಪಿ ಸರಕಾರ ವೈದ್ಯಕೀಯ ಉಪಕರಣಗಳ ಖರೀದಿ ಹೆಸರಿನಲ್ಲಿ ಅವ್ಯವಹಾರವನ್ನು ನಡೆಸುತ್ತಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ತಿಳಿಸಿದ್ದಾರೆ.