ಬೈಲಹೊಂಗಲ prajakiran.com : ಗಂಡ-ಹೆಂಡತಿ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಪಟ್ಟಣದ ಚನ್ನಮ್ಮ 1ನೇ ಕ್ರಾಸ್ ನಲ್ಲಿ ಮಂಗಳವಾರ ನಡೆದಿದೆ.
ಪತಿ ಗುರುನಾಥ ನಾರಾಯಣ ತಾವರೆ (45), ಈತನ ಪತ್ನಿ ಮೀನಾಕ್ಷಿ ನಾರಾಯಣ ತಾವರೆ( 32) ಆತ್ಮಹತ್ಯೆಗೆ ಶರಣಾದ ದುರ್ದೈವಿ ದಂಪತಿಗಳು.
ಘಟನೆ ಹಿನ್ನೆಲೆ: ಶಿಕ್ಷಕ ಗುರುನಾಥ ತಾವರೆ ಮೂಲತಃ ಖಾನಾಪೂರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದವರು. ಅಮಟೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ವಿಷಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬೆಳಗಾವಿಯ ಮೀನಾಕ್ಷಿ ಜೊತೆ ಕಳೆದ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತಿ, ಪತ್ನಿಯರಿಬ್ಬರ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು.
ಈ ವಿಷಯ ಕುರಿತು ನ್ಯಾಯಾಲಯ ಮೆಟ್ಟಿಲು ಏರಿದ್ದರು. ನ್ಯಾಯಾಲಯದಲ್ಲಿ ಪರಸ್ಪರ ಹೊಂದಾಣಿಕೆ ಜೀವನ ಸಾಗಿಸುವುದಾಗಿ ತಿಳಿಸಿ ಬೈಲಹೊಂಗಲ ಚನ್ನಮ್ಮ 1ನೇ ಕ್ರಾಸ್ ಮನೆಯೊಂದರಲ್ಲಿ ವಾಸವಾಗಿದ್ದರು.
ಪದೇ, ಪದೇ ಪರಸ್ಪರ ಇಬ್ಬರು ಮುನಿಸಿಕೊಳ್ಳುತ್ತಿದ್ದರು. ಅದೇ ಕಾರಣದಿಂದಾಗಿ ಸೋಮವಾರ ತಡರಾತ್ರಿ ಶಿಕ್ಷಕ ಗುರುನಾಥ ಮನೆಯಿಂದ ಹೊರ ಬಂದು ಪಟ್ಟಣದ ಹೊರ ವಲಯದ ಬೆಳಗಾವಿ ರಸ್ತೆಯ ಜಮೀನೊಂದರಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಷಯ ತಿಳಿದ ಪತ್ನಿಯು ಮನೆಯಲ್ಲಿಯೇ ನೇಣು ಹಾಕಿಕೊಂಡು ಸಾವಿಗಿಡಾಗಿದ್ದಾಳೆ. ಪತಿ, ಪತ್ನಿಯ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು, ಧಾವಿಸಿ ಆಕ್ರಂದಿಸಿದರು.
ದಾರುಣ ಸಾವಿಗೀಡಾದ ಶಿಕ್ಷಕ ಗುರುನಾಥ, ಈತನ ಪತ್ನಿ ಮೀನಾಕ್ಷಿಗೆ ಹತ್ತು ವರ್ಷದ ಒಬ್ಬ ಮಗ, ಮೂರು ವರ್ಷದ ಮಗು ಇದೆ. ಕಂದಮ್ಮಳ ಗೋಳು ಕಣ್ಣಾರೆ ಕಂಡ ಜನ ಮಮ್ಮಲ ಮರಗಿದರು.
ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ. ಅದನ್ನು ಅಳಸಿ ಹಾಕಿದ ದಂಪತಿಗಳ ಸಾವಿನ ದೃಶ್ಯ ಕಂಡ ನಾಗರಿಕರು, ಓಣಿಯ ಜನರು ಕಳವಳ ವ್ಯಕ್ತಪಡಿಸಿದರು.