ಬೆಂಗಳೂರು prajakiran.com : ಕರ್ನಾಟಕದ ವಿಧಾನ ಪರಿಷತ್ ಚುನಾವಣೆಗೆ ಕೊನೆಗೂ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡಿದೆ.
ಮಂಗಳವಾರ ಜೂನ್ 7 ರಂದು ಅಧಿಕೃತ ಆದೇಶ ಪ್ರಕಟಿಸಿದೆ. ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಜೂನ್ 30, 2020ರಂದು ಅವಧಿ ಮುಕ್ತಾಯಗೊಳ್ಳಲಿದ್ದು, ಈ 7 ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಸಲಾಗುತ್ತದೆ ಎಂದು ವಿವರಿಸಿದೆ.
ಜೂನ್ 30ರಂದು ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಜಯಮ್ಮ, ಎನ್ ಎಸ್ ಬೋಸ್ ರಾಜು, ಎಚ್ ಎಂ ರೇವಣ್ಣ, ಜೆಡಿಎಸ್ ಮುಖಂಡ ಟಿ ಎ ಶರವಣ ಮತ್ತು ಡಿ ಯು ಮಲ್ಲಿಕಾರ್ಜುನ್, ಎಂ.ಸಿ. ವೇಣುಗೋಪಾಲ್, ಅವರಅವಧಿ ಮುಕ್ತಾಯಗೊಳ್ಳಲಿದೆ.
ಈ 7 ವಿಧಾನ ಪರಿಷತ್ ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರ ಬರಲಿದೆ.
ಈಗಾಗಲೇ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಆರಂಭವಾಗಿದ್ದು, 7 ಸ್ಥಾನಗಳ ಪೈಕಿ ಬಿಜೆಪಿಗೆ 4, ಕಾಂಗ್ರೆಸ್ ಗೆ 2, ಜೆಡಿಎಸ್ ಗೆ ಒಂದು ಸ್ಥಾನ ದಕ್ಕುವಷ್ಟು ಸಂಖ್ಯಾಬಲವಿದೆ.
ಅದರಲ್ಲಿ ಆಪರೇಶನ್ ಕಮಲದಲ್ಲಿ ಮುಂಚೂಣಿಯಲ್ಲಿ ಮಾಜಿ ಸಚಿವರಾದ ಎಂ.ಟಿಬಿ. ನಾಗರಾಜ, ಹೆಚ್. ವಿಶ್ವನಾಥ, ಆರ್ ಶಂಕರ್, ರೋಶನ ಬೇಗ್, ಸಿ.ಪಿ. ಯೋಗಿಶ್ವರ ಸೇರಿ ದೊಡ್ಡ ಪಟ್ಟಿಯೇ ಇದೆ.
ರಾಜ್ಯಸಭೆಯಲ್ಲಿ ಹೈಕಮಾಂಡ್ ಹಿಡಿತ ಸಾಧಿಸಿದಂತೆಯೇ ಯಾರಿಗೆ ಅದೃಷ್ಟ ಒಲಿಯುತ್ತದೆ ಎಂಬುದು ಕಾದು ನೋಡಬೇಕಿದೆ.