ಧಾರವಾಡ prajakiran.com : ಕೆಪಿಎಂಇ ನೋಂದಣಿ ಇಲ್ಲದ ಆಸ್ಪತ್ರೆಯೊಂದಕ್ಕೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.
ಕಲಘಟಗಿ ತಾಲ್ಲೂಕು ಚಳಮಟ್ಟಿ ಗ್ರಾಮದಲ್ಲಿ ಸಂಜಯ್ ಸಿಂಗ್ ಎಂಬುವರು ಪೂನಮ್ ಪಾಲಿ ಕ್ಲಿನಿಕ್ ಹೆಸರಿನಲ್ಲಿ ಗ್ರಾಮಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಸ್ತ್ರಚಿಕಿತ್ಸಕ,ಕಲಘಟಗಿ ನೋಡಲ್ ಅಧಿಕಾರಿ ಡಾ.ಬಸವರಾಜ ಬಾಸೂರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ವೈದ್ಯರು ಬಿ ಹೆಚ್ ಎಂ ಎಸ್ ಪದವಿ ಹೊಂದಿರುವುದಾಗಿ ಹೇಳಿದರು.
ಆದರೆ ಪ್ರಮಾಣ ಪತ್ರ ಹಾಜರುಪಡಿಸಲಿಲ್ಲ ಹಾಗೂ ಕೆಪಿಎಂಇ ಕಾಯ್ದೆಯಡಿ ನೋಂದಣಿಯನ್ನು ಹೊಂದಿರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬೀಗ ಹಾಕಲಾಯಿತು.
ಅನಧಿಕೃತ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ ಜಿಲ್ಲಾಡಳಿತದ ಸಹಾಯವಾಣಿ 1077 ಗೆ ಮಾಹಿತಿ ನೀಡಬಹುದು ಎಂದು ಧಾರವಾಡ ಜಿಲ್ಲಾಡಳಿತ ತಿಳಿಸಿದೆ.