Online ಪಾವತಿಗೆ ಕಿಮ್ಮತ್ತಿಲ್ಲ ಎಂದ ಮೂರನೇ ವ್ಯಕ್ತಿ ..!
ಕತ್ತಲಲ್ಲಿ ಕುಳಿತ ಅಗಸಗಿ ಪತ್ರಕರ್ತನ ಕುಟುಂಬ..!
ಬೆಳಗಾವಿ prajakiran. com : ಹದಿಮೂರು ದಿನಗಳ ಹಿಂದೆ ಆನ್ಲೈನ್ ಮೂಲಕ ಎಪ್ರಿಲ್ ತಿಂಗಳಿನ ಮನೆಯ ವಿದ್ಯುತ್ ಬಿಲ್ ಪಾವತಿ ಮಾಡಿದ್ದರೂ ನೀವು ಬಿಲ್ ತುಂಬಿಲ್ಲ ಎಂದು ಮನೆಯ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಿ ಪತ್ರಕರ್ತನ ಕುಟುಂಬವನ್ನು ಕತ್ತಲಲ್ಲಿ ಕುಳಿತುಕೊಳ್ಳುವಂತೆ ಮೂರ್ಖತನದ ಪರಾಮಾವಧಿಯನ್ನು ಹೆಸ್ಕಾಂ ಕಾಕತಿ ವಿಭಾಗದ ಸಿಬ್ಬಂದಿಗಳು ನಿನ್ನೆ (ಸೋಮವಾರ) ಅಗಸಗಿ ಗ್ರಾಮದಲ್ಲಿ ಮಾಡಿದ್ದಾರೆ.
ತಾಲೂಕಿನ ಅಗಸಗಿ ಗ್ರಾಮದ ಮರಾಠಿ ದಿನಪತ್ರಿಕೆಯ ಬಿಡಿ ವರದಿಗಾರ ಸಿದ್ರಾಯ ಕೆಂಚಪ್ಪಾ ಗಡಕರಿ ಎಂಬುವರು ನೆಹರು ನಗರದಲ್ಲಿರುವ ಬೆಳಗಾವಿ ಗ್ರಾಮೀಣ ವಿದ್ಯುತ್ ಸರಬರಾಜು ಕಚೇರಿಯಲ್ಲಿ ದಿ. 17 -5-2022 ರಂದು ತಮ್ಮ ಮನೆಯ ಗ್ರಾಹಕ ವಿದ್ಯುತ್ ಸಂಪರ್ಕದ ಎಪ್ರಿಲ್ ತಿಂಗಳಿಗೆ ಬಂದ ರೂ 193 ಬಿಲ್ಲನ್ನು ಆನ್ಲೈನ್ (ಪೋನ್ ಪೇ) ಮುಖಾಂತರ ಪಾವತಿಸಿದ್ದಾರೆ.
ಅದರ ಬಗ್ಗೆ ಅವರ ತಾಯಿ ಹಾಗೂ ತಮ್ಮನಿಗೂ ತಿಳಿಸಿದ್ದಾರೆ. ಆದರೆ ತಿಂಗಳೂ ಕೊನೆಯ ಹಂತದಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡದವರ ಮನೆಗಳ ಸಂಪರ್ಕಗಳನ್ನು ಕಡಿತಗೊಳಿಸಲು ಬಂದ ಕಾಕತಿ ಹೆಸ್ಕಾಂ ಸಿಬ್ಬಂದಿಗಳು ನಿನ್ನೆ (ಸೋಮವಾರ) ಇವರ ಮನೆಯ ಸಂಪರ್ಕವನ್ನು ಕಡಿತಗೊಳಿಸಲು ಮುಂದಾಗಿದ್ದಾರೆ.
ಇದಕ್ಕೆ ಮನೆಯಲ್ಲಿದ್ದ ವೃದ್ಧ ತಾಯಿ ನನ್ನ ಮಗ ಬಿಲ್ ತುಂಬಿದ್ದಾನೆ. ಯಾಕೆ ನಮ್ಮ ಮನೆ ಕರೆಂಟ್ ಕಟ್ ಮಾಡಾಕತೇರಿ ಎಂದು ಪ್ರಶ್ನೆ ಮಾಡಿದ್ದಾಾರೆ.
ಇದಕ್ಕೆ ಸಿಬ್ಬಂದಿ ಜೊತೆ ಬಂದಿದ್ದ ಮೂರನೇ ವ್ಯಕ್ತಿಯೊಬ್ಬ ನೀವು ಬಿಲ್ ತುಂಬಿಲ್ಲ ಎಂದು ತಕ್ಷಣ ಸ್ವಿಚ್ ಕಿತ್ತು ಹಾಕಿದ್ದಾನೆ. ಆಗ ಮಗನಿಗೆ ಕರೆ ಮಾಡಿದ ತಾಯಿ ಬಿಲ್ ತುಂಬಿರುವ ಬಗ್ಗೆ ಧೃಡಪಡಿಸಿದ್ದಾಳೆ.
ಆದರೆ, ಅದಕ್ಕೆ ಸಿಬ್ಬಂದಿಗಳು ಈ ಆನ್ಲೈನ್ ಪಾವತಿಗೆ ಕಿಮ್ಮತ್ತಿಲ್ಲ. ನಮಗೆ ಕಾಗದದ ರಸೀದಿ ಬೇಕು ಎಂದು ವೃದ್ಧೆಯನ್ನು ನಿಂದಿಸಿ ಮತ್ತೆ ಬಿಲ್ ತುಂಬಿ ಆಗ ವಿದ್ಯುತ್ ಸಂಪರ್ಕ ನೀಡುತ್ತೇವೆ ಎಂದು ಹೇಳಿ ಹೋಗಿದ್ದಾರೆ.
ಸಂಜೆ ಸಮಯವಾಗಿದ್ದರಿಂದ ಕಕ್ಕಾಬಿಕ್ಕಿಯಾದ ತಾಯಿ ಕಿರಿಯ ಮಗನನ್ನು ತಕ್ಷಣ ಮನೆಗೆ ಕರೆದು ಘಟನೆ ಬಗ್ಗೆ ವಿವರಿಸಿದ್ದಾಳೆ.
ಇದಕ್ಕೆ ಮಕ್ಕಳಿಬ್ಬರು ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ.
ಅದಕ್ಕಾತ ಮನಬಂದಂತೆ ಅವಾಚ್ಯ ಶಬ್ದಗಳಿಂದ ಪತ್ರಕರ್ತನನ್ನು ನಿಂದಿಸಿದ್ದಾನೆ. ಇದರಿಂದ ನೊಂದ ಪತ್ರಕರ್ತ ಹುಬ್ಬಳ್ಳಿಯ ಹೆಸ್ಕಾಂನ ಮೇಲಾಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಿದ್ದಾನೆ.
ಇದಕ್ಕೆ ಎರಡು ದಿನದಲ್ಲಿ ಸ್ಪಂದಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮೂರ್ಖ ಸಿಬ್ಬಂದಿ ಹಾಗೂ ಮೂರನೇ ವ್ಯಕ್ತಿಗಳಿಂದಾಗಿ ಬಿಲ್ ತುಂಬಿದರೂ ಕತ್ತಲಲ್ಲಿ ಜೀವನ ಕಳೆಯುವ ಪರಿಸ್ಥಿತಿ ಪತ್ರಕರ್ತನ ಕುಟುಂಬಕ್ಕೆ ಬಂದೊದಗಿದಂತಾಗಿದೆ.
ಗ್ರಾಹಕ ನ್ಯಾಯಾಲಯಕ್ಕೆ ದೂರು :
ಈ ಘಟನೆಯಿಂದ ಮನನೊಂದಿರುವ ಪತ್ರಕರ್ತನ ಕುಟುಂಬ ಹೆಸ್ಕಾಂ ವಿರುದ್ಧ ಗ್ರಾಹಕ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದೆ.
ನಮ್ಮ ಯಾವುದೇ ತಪ್ಪು ಇಲ್ಲದಿದ್ದರೂ ನಮ್ಮ ತಾಯಿ ವೃದ್ದೆ ಎಂದು ಪರಿಗಣಿಸದೆ ಅವಳನ್ನು ನಿಂದಿಸಿ ಮಾನಸಿಕವಾಗಿ ಕಿರುಕುಳ ಆಗುವಂತೆ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಪತ್ರಕರ್ತ ಸಿದ್ರಾಯ ಗಡಕರಿ ತಿಳಿಸಿದ್ದಾರೆ.
ಮೂರನೇ ವ್ಯಕ್ತಿಯ ಹಾವಳಿ; ಹೆಸ್ಕಾಂ ಹೆಸರು ದಿವಾಳಿ..?
ಹೆಸ್ಕಾಂನ ಕರಾರು ಸಿಬ್ಬಂದಿ ಸಹ ಅಲ್ಲದಿದ್ದರೂ ಅಗಸಗಿ ಗ್ರಾಮಸ್ಥರ ಮೇಲೆ ಲೈನಮ್ಯಾನ್ ಗಿಂತಲೂ ಹೆಚ್ಚು ಅಧಿಕಾರವನ್ನು ಒಬ್ಬ ಮೂರನೇ ವ್ಯಕ್ತಿ ತೋರಿಸುತ್ತಿದ್ದಾನೆ.
ಅಧಿಕಾರ ದರ್ಪ ತೋರಿಸಲು ಈತನೇ ಮುಂದೆ ಬಂದು ನಿಲ್ಲುತ್ತಾನೆ. ಗ್ರಾಮಕ್ಕೆ ಈತನೇ ಲೈನಮ್ಯಾನೋ ಹೆಸ್ಕಾಂ ನೇಮಿಸಿರುವ ವ್ಯಕ್ತಿಯೋ ಎಂಬ ಪ್ರಶ್ನೆ ಉದ್ಭವಿಸಿದೆ.
ಈ ಬಗ್ಗೆ ಈ ಹಿಂದೆ ಹಲವರು ಹೆಸ್ಕಾಂ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ.
ಹೀಗಾಗಿ ಈ ಪ್ರಕರಣದಲ್ಲೂ ಸಹ ಈ ವ್ಯಕ್ತಿಯನ್ನು ಪ್ರಶ್ನೆ ಮಾಡಿದ ಪತ್ರಕರ್ತನಿಗೆ ಮನಬಂದಂತೆ ಬೈದಿದ್ದಾಗಿ ತಿಳಿದು ಬಂದಿದೆ.
ಇದರಿಂದ ನೊಂದಿರುವ ಪತ್ರಕರ್ತ ಈತನ ವಿರುದ್ಧ ಕ್ರಮ ಕೈಗೊಳ್ಳಲು ಅನೇಕ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಇತನಿಂದಾಗಿ ಅಗಸಗಿ ಗ್ರಾಮದಲ್ಲಿ ಹೆಸ್ಕಾಂನವರು ಎಷ್ಟೇ ಕೆಲಸ ಮಾಡಿದರೂ ಅದು ದಿವಾಳಿಯಾಗಿ ಹೋಗುತ್ತಿದೆ ಎಂದು ಕೆಲ ಸಿಬ್ಬಂದಿಗಳು ಹೇಳುತ್ತಿದ್ದಾರೆ.
ಇಷ್ಟಕ್ಕೂ ಈತನಿಗೆ ಗ್ರಾಮದಲ್ಲಿ ಅತಿ ಅವಶ್ಯಕ ಮತ್ತು ಸೂಕ್ಷ್ಮವಾದ ವಿದ್ಯುತ್ ಇಲಾಖೆಯ ಕೆಲಸವನ್ನು ಮಾಡಲು ಯಾರು ಅನುಮತಿ ನೀಡಿದ್ದಾರೆ ಎಂದು ಗ್ರಾಮಸ್ಥರಲ್ಲಿ ಯಕ್ಷ ಪ್ರಶ್ನೆ ಉದ್ಭವಿಸಿದೆ.