ಧಾರವಾಡ prajakiran.com : ಧಾರವಾಡದಲ್ಲಿ ಆರೋಗ್ಯ ಇಲಾಖೆ ಪದೆ ಪದೇ ಯಡವಟ್ಟು ಮಾಡುತ್ತಿರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಕೋವಿಡ್ನಿಂದ ಒಬ್ಬ ವ್ಯಕ್ತಿ ಸತ್ತು ಅಂತ್ಯ ಸಂಸ್ಕಾರದ ಬಳಿಕವೂ ಆರಾಮ ಇದಾರಾ ಅಂತಾ ಕರೆ ಬಂದಿರುವುದು ಕೇಳಿ ಮನೆ ಮಂದಿಯಲ್ಲಾ ಆತಂಕಗೊಂಡಿದ್ದರು.
ಆರೋಗ್ಯ ಇಲಾಖೆ ಸಿಬ್ಬಂದಿ ಮಾತು ಕೇಳಿ ಮನೆಯವರಿಗೆ ಶಾಕ್ ಆಗಿದೆ. ಅಲ್ಲದೆ, ಆಕ್ರೋಶದ ಕಟ್ಟೆಯೂ ಒಡೆದು ಹೋಗಿದೆ.
ಧಾರವಾಡದ ಮೃತ್ಯುಂಜಯ ನಗರ ಕೊಟ್ಟಣದ ಓಣಿಯ ನಿವಾಸಿಯೊಬ್ಬರು
ಕೋವಿಡ್ನಿಂದ ಜುಲೈ 24ರಂದು ನಿಧನವಾಗಿದ್ದರು. ಆ ವ್ಯಕ್ತಿಯ ಅಂತ್ಯಸಂಸ್ಕಾರ ಸಹ ಅದೇ ದಿನ ಸಿಬ್ಬಂದಿ ನೆರವೇರಿಸಿದ್ದರು.
ಅಂತ್ಯಸಂಸ್ಕಾರ ಮಾಡಿದ ಎರಡು ದಿನಗಳ ಬಳಿಕ ಕಿಮ್ಸ್ ಸಿಬ್ಬಂದಿ ಕಾಲ್ ಮಾಡಿದ್ದಾರೆ.
ನಿಮ್ಮ ಮನೆಯ ಸದಸ್ಯ ಆರಾಮ ಇದಾರಾ ಅಂತಾ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಶಾಂತವಾಗಿಯೇ ಉತ್ತರಿಸಿದ ಮನೆ ಸದಸ್ಯರು ಇಲ್ಲ ಅವರು ಮೊನ್ನೆಯೇ ನಿಧನವಾಗಿದ್ದಾರೆ ಅಂತಾ ಹೇಳಿದ್ದಾರೆ.
ಆ ಬಳಿಕವೂ ಕಾಲ್ ಮಾಡಿ ಮತ್ತೆ ಕೇಳಿದ ಸಿಬ್ಬಂದಿಯ ವರ್ತನೆಯಿಂದ ರೋಸಿ ಹೋಗಿದ್ದಾರೆ.
ಅವರು ನಿಧನವಾಗಿದ್ದಾರೆಂದು ಸ್ಪಷ್ಟಪಡಿಸಿದ ಬಳಿಕವು ಮತ್ತೊಂದು ಕರೆ ಮಾಡಿ ಆರೋಗ್ಯ ವಿಚಾರಿಸಿ ಯಡವಟ್ಟು ಮಾಡಿಕೊಂಡಿದ್ದಾರೆ.
ಅಲ್ಲದೆ, ವ್ಯಕ್ತಿ ನಿಧನವಾದ 9 ದಿನದ ಬಳಿಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ,ಪೊಲೀಸರು ಮನೆ ಸೀಲ್ಡೌನ್ ಮಾಡಲು ಆಗಮಿಸಿರುವುದು ಅವರನ್ನು ಕೆರಳಿಸಿದೆ.
ಇದರಿಂದಾಗಿ ಅವರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ಸೀಲ್ ಡೌನ್ ಮಾಡುವಅಗತ್ಯವಿಲ್ಲ. ಕಾಟಾಚಾರಕ್ಕೆ ಮಾಡುವುದಾದರೆ ಯಾಕೆ ಮಾಡ್ತಿರಿ ಹೋಗಿ ಬಿಡಿ ಸುಮ್ಮನೇ ಜನರ ನೆಮ್ಮದಿ ಹಾಳುಮಾಡಬೇಡಿ ಎಂದು ಬಿಸಿ ತಾಕಿಸಿದ್ದಾರೆ.
ಆದರೂ ನಾಮಕಾವಾಸ್ತೆ ಎಂಬಂತೆ ಎಲ್ಲ ಮುಗಿದು 9 ದಿನ ಬಳಿಕ ಕೊಟ್ಟಣದ ಓಣಿಯನ್ನು ಪಾಲಿಕೆ ಸಿಬ್ಭಂದಿ ಸೀಲ್ಡೌನ್ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿರುವುದು ವಿರ್ಪಯಾಸವೇ ಸರಿ.