- ಗಂಜಿಗಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ
ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ಅತಿಯಾದ ಮಳೆಯಾದ ಪರಿಣಾಮ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಎಂಟು ವರ್ಷದ ಬಾಲಕಿ ನೀರಿನಲ್ಲಿ ಹರಿದುಕೊಂಡು ಹೋಗಿದ್ದಳು. ಆಕೆಯ ಹುಡುಕಾಟಕ್ಕೆಶೋಧ ಕಾರ್ಯ ಮುಂದುವರೆದಿದೆ.
ಹಿರೇಕೆರೆಯು ತುಂಬಿ ಹರಿಯುವಾಗ ನಿನ್ನೆ ಆಗಸ್ಟ್ ೬ ರಂದು ಗ್ರಾಮದ ಹನಮಂತಪ್ಪ ಗಾಣಿಗೇರ ಅವರ ಮಗಳು ಶ್ರೀದೇವಿ (೮) ಆಕಸ್ಮಿಕವಾಗಿ ಹರಿಯುವ ನೀರಿಗೆ ಬಿದ್ದು ತೇಲಿ ಹೋಗಿದ್ದಳು.
ತಕ್ಷಣ ಈ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಗ್ನಿಶಾಮಕ ಹಾಗೂ ಎನ್ ಡಿ ಆರ್ ಎಫ್ ತಂಡಗಳನ್ನು ಘಟನಾ ಸ್ಥಳಕ್ಕೆ ರವಾನಿಸಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಆದೇಶಿಸಿದ್ದರು. ಕಲಘಟಗಿ ತಹಶಿಲ್ದಾರ ಅಶೊಕ ಶಿಗ್ಗಾಂವಿ ತಂಡಗಳೊಂದಿಗೆ ಬಾಲಕಿಯ ಶೊಧನೆಗಾಗಿ ಕ್ರಮ ಕೈಗೊಂಡಿದ್ದರು. ರಾತ್ರಿ ಬಹು ಹೊತ್ತಿನವರೆಗೂ ಶೊಧಿಸಿದರೂ ಯಾವುದೇ ಗುರುತ್ತ ಪತ್ತೆ ಆಗಿರಲಿಲ್ಲ,
ಹೀಗಾಗಿ ಶುಕ್ರವಾರ ಬೆಳಿಗ್ಗೆ (ಆಗಸ್ಟ್ ೭) ೬ ಗಂಟೆಯಿಂದ ಎನ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕ ತಂಡಗಳು ಮತ್ತೆ ಕಾರ್ಯಚರಣೆ ಆರಂಭಿಸಿವೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಬೆಳಿಗ್ಗೆ ಗಂಜಿಗಟ್ಟಿ ಗ್ರಾಮಕ್ಕೆ ಸ್ವತಃ ತೆರಳಿ ಘಟನಾ ಸ್ಥಳದಲ್ಲಿ ಹಾಜರಿದ್ದು, ಪರಿಹಾರ ಹಾಗೂ ಶೊಧನಾ ಕಾರ್ಯ ಪರಿಶೀಲಿಸಿದರು.
ನಂತರ ಅವರು ಹನುಮಂತಪ್ಪ ಗಾಣಿಗೇರ ಅವರ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಶೀಘ್ರದಲ್ಲಿ ಜಿಲ್ಲಾಡಳಿತವು ಸರಕಾರದಿಂದ ಸಿಗುವ ಪರಿಹಾರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ತಲುಪಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಲಘಟಗಿ ತಹಶಿಲ್ದಾರ ಅಶೋಕ ಶಿಗ್ಗಾಂವಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.