ತಲೆ, ತೊಡೆಗೆ ಹುಕ್ಕಿದ್ದ ಗುಂಡು
ನಡುರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಸಾವು
ಹುಬ್ಬಳ್ಳಿ prajakiran.com : ಧಾರವಾಡದ ಕುಖ್ಯಾತ ರೌಡಿಶೀಟರ್ ಸೈಯದ್ ಇರ್ಫಾನ್ ಅಲಿಯಾಸ್ ಫ್ರೂಟ್ ಇರ್ಫಾನ್ (೪೫) ಚಿಕಿತ್ಸೆ ಫಲಿಸದೆ ನಡುರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಗುರುವಾರ ಕಾರವಾರ ರಸ್ತೆಯಲ್ಲಿ ಸಂಜೆ 4.30ರ ಸುಮಾರಿಗೆ ಐದು ಆರು ಯುವಕರ ತಂಡವೊಂದು ಗುಂಡಿನ ದಾಳಿ ನಡೆಸಿ ಪರಾರಿಯಾಗಿತ್ತು.
ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ತೀವ್ರ ಗಾಯದಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಬದುಕುಳಿಸಲು ಆಗಲಿಲ್ಲ.
ಈ ಕೊಲೆ ಪ್ರಕರಣ ಹುಬ್ಬಳ್ಳಿ-ಧಾರವಾಡ ಹಾಗೂ ಜಿಲ್ಲೆಯ ಜನತೆ ಯನ್ನು ಬೆಚ್ಚಿ ಬೀಳಿಸಿದೆ. ಅದರಲ್ಲೂ ವಿಶೇಷವಾಗಿ ರೌಡಿಶೀಟರ್, ಮರಿ ಪುಡಾರಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.
ಘಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಸೇರಿದಂತೆ ಹಳೇ ಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ. ಆರೋಪಿಗಳ ಪತ್ತೆಗೆ ತನಿಖಾ ತಂಡ ಕೂಡ ರಚಿಸಲಾಗಿದೆ.
ಪ್ರಕರಣದ ವಿವರ :
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಆಲ್ ತಾಜ್ ಹೋಟೆಲ್ ನಲ್ಲಿ ರೌಡಿಶೀಟರ್ ಫ್ರುಟ್ ಇರ್ಫಾನ್ ತನ್ನ ಮಗನ ಮದುವೆ ಔತಣಕೂಟದ ಸಂಭ್ರಮದಲ್ಲಿದ್ದ.
ಸಂಬಂಧಿಕರೊಂದಿಗೆ ಮಾತನಾಡುತ್ತಿದ್ದ ಚಲನವಲನ ವೀಕ್ಷಣೆ ಮಾಡುತ್ತಿದ್ದ ಒಬ್ಬ ಯುವಕ, ಇನ್ನಿಬ್ಬರು ಬುಲೇಟ್ ಮೇಲೆ ಬರುತ್ತಿದ್ದಂತೆ ಇಬ್ಬರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.
ಈ ಎಲ್ಲಾ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಅವುಗಳ ಆಧಾರದ ಮೇಲೆ ತನಿಖೆಯ ಜಾಡು ಹಿಡಿದಿದ್ದಾರೆ.
ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಫ್ರೂಟ್ :
2006ರ ವೇಳೆಯಲ್ಲಿ ಧಾರವಾಡದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಈತ ಮಾರುಕಟ್ಟೆಯಲ್ಲಿ ಯುವಕರ ಪಡೆ ಕಟ್ಟಿದ್ದ. ಅವರಿಗೆ ಗ್ಯಾಂಗ್ ಲೀಡರ್ ಆದವ ಹಣ್ಣು ಮಾರಾಟಕ್ಕೆ ತಳ್ಳುವ ಗಾಡಿಗಳನ್ನು ಬಿಡುತ್ತಿದ್ದ.
ಈ ವಿಚಾರದಲ್ಲಿ ಇಬ್ಬರ ಮಧ್ಯೆ ಪೈಪೋಟಿ ನಡೆದು ಅದು ಕೊಲೆಯವರೆಗೆ ಬಂದು ನಿಂತಿತ್ತು ಈ ಪ್ರಕರಣದಿಂದ ಮತ್ತಷ್ಟು ಕುಖ್ಯಾತಿ ಗಳಿಸಿದ ನಂತರ ರೌಡಿಗಳ ತಂಡ ಕಟ್ಟಿ ಮಾರುಕಟ್ಟೆಯ ಪ್ರತಿಯೊಂದು ವಿಚಾರದಲ್ಲಿ ಮೂಗು ತೂರಿಸಿ ರೌಡಿಶೀಟರ್ ಪಟ್ಟ ಕಟ್ಟಿಕೊಂಡ.
ಆನಂತರ ರಿಯಲ್ ಎಸ್ಟೇಟ್ ದಂಧೆಗೆ ಕೈ ಹಾಕಿದ್ದೆ ತಡ ಭೂ ಮಾಲೀಕರಿಗೆ ಅರ್ಧ ಹಣ ಕೊಟ್ಟು ಭೂಮಿ ಬರೆಸಿಕೊಳ್ಳುವುದು, ಜೀವ ಬೆದರಿಕೆ ಹಾಕುವುದು ಭೂಮಿ ಒತ್ತುವರಿ ಮಾಡುವುದು ಶುರು ಮಾಡಿಕೊಂಡ.
ಕೋಟ್ಯಾಂತರ ರೂಪಾಯಿ ಅದಲು ಬದಲು ಮಾಡುವ ಇತನ ಮೀಟರ್ ಬಡ್ಡಿ ವ್ಯವಹಾರದಿಂದ ಅನೇಕರು ಊರು ಬಿಟ್ಟಿದ್ದರು.
ಇತನ ಮೇಲೆ ಧಾರವಾಡದ ಶಹರ, ವಿದ್ಯಾಗಿರಿ, ಉಪನಗರ ಪೊಲೀಸ್ ಠಾಣೆಗಳಲ್ಲಿ ಹಲವರಿಗೆ ಜೀವ ಬೆದರಿಕೆ, ಮೀಟರ್ ಬಡ್ಡಿ ಪ್ರಕರಣಗಳು ಸಹ ದಾಖಲಾಗಿವೆ.
ಎರಡು ಬಾರಿ ಗಡಿಪಾರು :
ಪ್ರೂಟ್ ಇರ್ಫಾನ್ ದಂಧೆ ಮತ್ತು ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಈ ಹಿಂದಿನ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ್ ಗಡಿ ಪಾರು ಮಾಡಿದ್ದರು. ಆಗ ನ್ಯಾಯಾಲಯದಿಂದ ತಡೆ ಆಜ್ಞೆ ತಂದಿದ್ದ.
ಮತ್ತೇ ಹಾಲಿ ಕಮಿಷನರ್ ಆರ್ ದಿಲೀಪ್ ಅವರು ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಹಾಕಿದ ಮೇಲೆ ಇತನನ್ನು ಹುಬ್ಬಳ್ಳಿ-ಧಾರವಾಡದಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಹನೂರಿಗೆ ಗಡಿಪಾರು ಮಾಡಲಾಗಿತ್ತು.
ನ್ಯಾಯಾಲಯದ ಮೂಲಕ ಅದನ್ನು ಮತ್ತೆ ತೆರವುಗೊಳಿಸಿ ದಾಂಡೇಲಿಯಲ್ಲಿ ರೆಸಾರ್ಟ್ ವೊಂದನ್ನು ಖರೀದಿಸಿ ಅಲ್ಲಿಯೇ ತಂಗಿದ್ದ