ಧಾರವಾಡ prajakiran.com : ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಧಾರವಾಡದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ನೌಕರರೊಬ್ಬರನ್ನು ಅಮಾನತು ಮಾಡಲಾಗಿದೆ.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪ್ರಥಮ ದರ್ಜೆ ಸಹಾಯಕ ಗುರುರಾಜ ಕುಲಕರ್ಣಿ ಎಂಬುವರೇ ಅಮಾನತುಗೊಂಡ ನೌಕರನಾಗಿದ್ದು, ಅಚ್ಚರಿ ಸಂಗತಿಯೆಂದರೆ ಇವರೇ ಪ್ರಭಾರ ನಿರ್ದೇಶಕ ಹುದ್ದೆ ಕೂಡ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಗುರುರಾಜ ಕುಲಕರ್ಣಿ ಅವರು ಲೈಂಗಿಕ ಕಿರುಕುಳ ನಡೆಸಿದ ಬಗ್ಗೆ ಮಹಿಳಾ ಸಹೋದ್ಯೋಗಿ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಧಾರವಾಡ ಜಿಲ್ಲಾ ಪಂಚಾಯತ್ ಸಿಇಒ ಆದೇಶಸಿದ್ದರು.
ಅವರು ನೇಮಿಸಿದ್ದ ಸಮಿತಿ ನೀಡಿದ ವರದಿ ಆಧರಿಸಿಯೇ ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ ಅವರು ಈ ದಿಟ್ಟ ಕ್ರಮ ಕೈಗೊಂಡು ಇಲಾಖೆ ನೌಕರ ಗುರುರಾಜ ಕುಲಕರ್ಣಿಯನ್ನು ಅಮಾನತು ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.