ಧಾರವಾಡ prajakiran.com : ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ಮೂರನೇ ಅಧಿಕ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ಶುಕ್ರವಾರ ಬೆಳಿಗ್ಗೆ ನ್ಯಾಯಾಧೀಶೆಯರಾದ ಶ್ರೀಮತಿ ಎಂ.ಪಂಚಾಕ್ಷರಿ ಅವರು, ನಿನ್ನೆ ಪ್ರಕರಣದ ವಾದ ಪ್ರತಿವಾದ ಆಲಿಸಿದ ಬಳಿಕ ತೀರ್ಪನ್ನು ಕಾಯ್ದಿರಿಸಿದ್ದರು.
ಸಂಜೆ ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು ಮೂರು ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಸಿಬಿಐ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.
ಅಲ್ಲದೆ, ಅವರಿಗೆ ಪ್ರತಿ ದಿನ ಅಗತ್ಯ ಆರೋಗ್ಯ ತಪಾಸಣೆ ಹಾಗೂ ಆಹಾರ ಸರಬರಾಜು ಮಾಡುವುದು.
ಮತ್ತು ವಕೀಲ ಬಾಹುಬಲಿ ಧನವಡೆ ಇಲ್ಲವೇ ಅವರು ಸೂಚಿಸಿದ ವ್ಯಕ್ತಿ, ಕುಟುಂಬದ ಸದಸ್ಯರ ಭೇಟಿಗೆ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಪ್ರತಿ ದಿನ ಅವಕಾಶ ನೀಡಬೇಕು ಎಂದು ಸೂಚಿಸಿದ್ದಾರೆ.
ನವೆಂಬರ್ 9ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಮತ್ತೆ ನ್ಯಾಯಾಲಯದ ಎದುರು ಹಾಜರು ಪಡಿಸಲು ತಿಳಿಸಿ ಆದೇಶ ಹೊರಡಿಸಿದ್ದಾರೆ.
ನಿನ್ನೆ ರಾತ್ರಿಯೇ ವಿನಯ್ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಂಡು ಹೋಗಿ ಸಿಬಿಐ ಅಧಿಕಾರಿಗಳು ಬಿಟ್ಟು ಬಂದಿದ್ದರು.
ಹೀಗಾಗಿ ಅವರು ಅಲ್ಲಿ ಒಂದು ದಿನದ ಕಾಲ ವಿಚಾರಣಾಧೀನ ಖೈದಿಯಾಗಿದ್ದರು. ಸಂಜೆ ನ್ಯಾಯಾಲಯದ ಆದೇಶ ಹೊರಬೀಳುವುದು ವಿಳಂಭವಾಗಿದ್ದರಿಂದ ಅವರು ಇಂದು ರಾತ್ರಿ ಕೂಡ ಅಲ್ಲಿ ಯೇ ಕಳೆದಿದ್ದಾರೆ.
ಸಿಬಿಐ ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಹೆಚ್ಚಿನ ವಿಚಾರಣೆಗಾಗಿ ಶನಿವಾರ ಬೆಳಗಿನ ಜಾವದಿಂದ ಸೋಮವಾರ ದ ವರೆಗೆ ತಮ್ಮ ವಶಕ್ಕೆ ತೆಗೆದುಕೊಳ್ಳಲಿದ್ದಾರೆ.
ಆ ಬಳಿಕ ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
.