ಧಾರವಾಡ ಪ್ರಜಾಕಿರಣ.ಕಾಮ್ ಏ.13: ಹುಬ್ಬಳ್ಳಿಯ ವಿದ್ಯಾನಗರ ವಾಸಿ ಡಾ.ಗೂಳಪ್ಪ ಚಿಕ್ಕನರಗುಂದ ಅವರು ಮಾರ್ಚ್ 2020ರಲ್ಲಿ ತಮ್ಮ ಕುಟುಂಬ ಸಮೇತ ಸಿಂಗಾಪೂರ ಹಾಗೂ ಮಲೇಷಿಯಾ ಪ್ರವಾಸ ಮಾಡಲು ಇಚ್ಚಿಸಿದ್ದರು.
ಅದಕ್ಕಾಗಿ ಅವರು ರೂ.1,80,000/- ಹಣ ಹುಬ್ಬಳ್ಳಿಯ ದೇಶಪಾಂಡೆ ನಗರದ ಇ.ಎಮ್.ಐ. ಹಾಲಿಡೆಸ್ಗೆ ಸಂದಾಯ ಮಾಡಿ ತಮ್ಮ ಪ್ರವಾಸದ ದಿನಾಂಕ ನಿಗದಿಪಡಿಸಿಕೊಂಡಿದ್ದರು.
ಕೋವಿಡ್-19ರ ಕಾರಣ ಹೇಳಿ ಎದುರುದಾರ ಇ.ಎಮ್.ಐ. ಹಾಲಿಡೆಸ್ ಪ್ರವಾಸ ಮುಂದೂಡಿದ್ದರು.
ಕೋವಿಡ್ ಮುಗಿದ ಮೇಲೆ ಪ್ರವಾಸ ನಿಗದಿ ಮಾಡಲು ದೂರುದಾರರು ವಿನಂತಿಸಿದರೂ ಎದುರುದಾರರು ಅವರಿಗೆ ಪ್ರವಾಸದ ಸೌಲಭ್ಯ ಕಲ್ಪಿಸಿರಲಿಲ್ಲ.
ಪ್ರವಾಸ ನಿಗದಿ ಮಾಡದೆ ಅಥವಾ ತನಗೆ ಹಣ ವಾಪಸ ಕೊಡದೆ ಎದುರುದಾರ ಇ.ಎಮ್.ಐ. ಹಾಲಿಡೆಸ್ ರವರು ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಕ್ರಮ ಕೈಗೊಳ್ಳಲು ದೂರು ಸಲ್ಲಿಸಿದ್ದರು.
ಅವರ ದೂರನ್ನು ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು ವಿಚಾರಣೆ ನಡೆಸಿ ದೂರುದಾರರಿಗೆ ವಿದೇಶ ಪ್ರವಾಸ ಮಾಡಿಸುವುದಾಗಿ ಹೇಳಿ ಅವರಿಂದ ರೂ.1,80,000/- ಪ್ರವಾಸದ ಖರ್ಚು ವೆಚ್ಚಕ್ಕಾಗಿ ಅವರಿಂದ ಪಡೆದು ದೂರುದಾರರಿಗೆ ಆ ಪ್ರವಾಸದ ಸೌಲಭ್ಯ ಒದಗಿಸದೆ ಇರುವುದು ಅಥವಾ ರೂ.1,80,000/- ಹಣವನ್ನು ಅವರಿಗೆ ಹಿಂದುರಿಗಿಸದೆ ಎದುರುದಾರ ಇ.ಎಮ್.ಐ. ಹಾಲಿಡೆಸ್ ರವರು ದೂರುದಾರರಿಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
ಒಂದು ತಿಂಗಳ ಒಳಗಾಗಿ ದೂರುದಾರರಿಗೆ ರೂ.1,80,000/- ಹಣ ಮತ್ತು ದಿ:16/02/2020ರಿಂದ ಆ ಹಣದ ಮೇಲೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡಲು ಆದೇಶಿಸಿದೆ.
ಎದುರುದಾರರ ಕೃತ್ಯದಿಂದ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣ ನಡೆಸಿದ ಖರ್ಚು ವೆಚ್ಚಕ್ಕಾಗಿ ರೂ.10,000/- ಸೇರಿ ಒಟ್ಟು ರೂ.2,40,000/- ಕೊಡುವಂತೆ ಎದುರುದಾರ ಇ.ಎಮ್.ಐ. ಹಾಲಿಡೆಸ್ ರವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.