ಧಾರವಾಡ prajakiran.com : ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ ತಡೆಗಟ್ಟುವ ಸಲುವಾಗಿ ಕರ್ನಾಟಕ ಪೊಲೀಸ್ ಹಗಲಿರುಳು ಶ್ರಮಿಸುತ್ತಿದೆ.
ಅದಕ್ಕೆ ಪೂರಕವಾಗಿ ಯುವಜನರಿಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹುಬ್ಬಳ್ಳಿಯ ವಿದ್ಯುತ್ ಜಾಗೃತ ದಳದ ಪೊಲೀಸ್ ಇನ್ಸಪೆಕ್ಟರ್ ಆಗಿರುವ ಮುರುಗೇಶ ಚೆನ್ನಣ್ಣನವರ ಅವರು ಡ್ರಗ್ಸ್ ಗೆ ವಿದಾಯ ಹೇಳಿ ಎಂದು ಸೈಕಲ್ ಯಾತ್ರೆ ಕೈಗೊಂಡು ಗಮನ ಸೆಳೆದಿದ್ದಾರೆ.
ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸುಮಾರು 3800 ಕಿಲೋಮೀಟರ್ ಪ್ರಯಾಣ ಆರಂಭಿಸಿದ್ದು, ಹನ್ನೆರಡು ದಿನಗಳಲ್ಲಿ ತವರು ಜಿಲ್ಲೆ ಧಾರವಾಡಕ್ಕೆ ತಲುಪಿದ್ದಾರೆ.
ಹನ್ನೆರಡು ದಿನದ
ಯಶಸ್ವಿ ಪ್ರಯಾಣ ಮುಗಿಸಿದ್ದಕ್ಕಾಗಿ
ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಹಾಗೂ ಪ್ರಶಾಂತ ಹಿಪ್ಪರಗಿ ಅವರಿಗೆ ಧಾರವಾಡದ ಅನೇಕ ಸಹೃದಯ ಗೆಳೆಯರು, ಪೊಲೀಸರು ಹಾಗೂ ಸಾರ್ವಜನಿಕರು ಆತ್ಮೀಯವಾಗಿ ಬರಮಾಡಿಕೊಂಡು ಮತ್ತೆ ಮುಂದಿನ ಸೈಕಲ್ ಯಾತ್ರೆಗೆ ಶುಭವಾಗಲಿ ಎಂದು ಹಾರೈಸಿದರು.
ಅಲ್ಲದೆ, ಭಾರತದ ಕಿರೀಟ, ಮುಕುಟಮಣಿಯಂತಿರುವ ಕಾಶ್ಮೀರದ ವೈಷ್ಣವ ದೇವಿಯಿಂದ ಕನ್ಯಾಕುಮಾರಿ ಯವರೆಗೆ ಪೊಲೀಸ್ ಇನ್ಸಪೆಕ್ಟರ್ ಒಬ್ಬರು ಸೈಕಲ್ ಮೂಲಕ ಡ್ರಗ್ಸ್ ದಿಂದ ಆಗುವ ಹಾನಿ, ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿರುವುದು ಸಂತಸದ ಸಂಗತಿ.
ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಪೊಲೀಸ್ ಇನ್ಸಪೆಕ್ಟರ್ ಒಬ್ಬರು ಸೈಕಲ್ ಮೂಲಕ 3800 ಕಿಲೋಮೀಟರ್ ಕ್ರಮಿಸಿ ಸೇ ನೋ ಟು ಡ್ರಗ್ಸ್ ಎಂದು ಸಾರುತ್ತಿರುವುದು ಇತರರಿಗೆ ಮಾದರಿಯಾಗಿದೆ.
ಮುರುಗೇಶ ಅವರಿಗೆ ಪ್ರಶಾಂತ್ ಹಿಪ್ಪರಗಿ ಸಾಥ್ ನೀಡಿದ್ದು, ಧಾರವಾಡದ ಹಲವರು ಸೈಕಲ್ ಸವಾರಿ ಮಾಡುವ ಮೂಲಕ ಧಾರವಾಡ ಜನತೆಗೆ ಅರಿವು ಮೂಡಿಸಿದರು.
ಅದರಲ್ಲೂ ಅತಿಯಾದ ಮೈ ಕೊರೆಯುವ ಚಳಿಯಲ್ಲಿ ಇಂತಹ ಸೈಕಲ್ ಯಾತ್ರೆ ಕೈಗೊಂಡಿರುವುದು ಇಡೀ ಧಾರವಾಡ ಜಿಲ್ಲೆಗೆ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಹೆಮ್ಮೆಯ ಸಂಗತಿ ಎಂದು ಮುರುಗೇಶ ಚೆನ್ನಣ್ಣನವರ ಅವರಿಗೆ ಅನೇಕರು ಅಭಿನಂದನೆ ಸಲ್ಲಿಸಿ, ಮುಂದಿನ ಸೈಕಲ್ಶು ಸವಾರಿಗೆ ಶುಭ ಹಾರೈಸಿದರು.