ಧಾರವಾಡ prajakiran.com : ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಧಾರವಾಡದ ಅಪರ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ೧೧ ಜನ ಲಿಪಿಕ ನೌಕರರಿಗೆ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಬಡ್ತಿ ನೀಡಲಾಯಿತು.
ಗೆಜೆಟೆಡ್ ಮ್ಯಾನೇಜರ್ ಹುದ್ದೆಯಿಂದ ಗೆಜೆಟೆಡ್ ಅಸಿಸ್ಟಂಟ್(ಜಿಎ) ಹುದ್ದೆಗೆ ವ್ಹಿ.ಜಿ. ಬದಾಮಿ ಹಾಗೂ ಎಸ್.ಎಂ. ಕೋಟಿ ಅವರಿಗೆ ಬಡ್ತಿ ನೀಡಲಾಯಿತು. ಉಳಿದಂತೆ ಅಧೀಕ್ಷಕರ ಹುದ್ದೆಯಿಂದ ಗೆಝೆಟೆಡ್ ಮ್ಯಾನೇಜರ್ ಹುದ್ದೆಗೆ ಒಟ್ಟು ೯ ಜನರಿಗೆ ಬಡ್ತಿ ಕೊಡಲಾಯಿತು.
ಅಪರ್ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಬಡ್ತಿ ಆದೇಶ ಪತ್ರ ವಿತರಿಸಿ ಮಾತನಾಡಿ, ಬಡ್ತಿ ಹುದ್ದೆಯ ಮೂಲಕ ಪ್ರಾಪ್ತವಾಗುವ ಅಧಿಕಾರವನ್ನು ಬಳಕೆ ಮಾಡುವಲ್ಲಿ ವೃತ್ತಿ ಬದ್ಧತೆಯ ಜೊತೆಗೆ ಆಡಳಿತದಲ್ಲಿ ಮೌಲ್ಯಗಳಿಗೆ ಸ್ಥಾನವಿರಲಿ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಮೂಲಕ ಸರಕಾರದ ಆಶಯಗಳನ್ನು ಸಾಕಾರಗೊಳಿಸಲು ಎಲ್ಲ ಪತ್ರಾಂಕಿತ ಅಧಿಕಾರಿಗಳು ನೂರಕ್ಕೆ ನೂರರಷ್ಟು ಶ್ರಮವಹಿಸುವ ಅಗತ್ಯವಿದೆ.
ಸರಕಾರದ ಪ್ರತಿಯೊಂದೂ ವಿದ್ಯಾವಿಕಾಸದ ಯೋಜನೆಗಳ ಅನುಷ್ಠಾನದ ಗುರುತರ ಜವಾಬ್ದಾರಿ ನಮ್ಮ ಮೇಲಿದ್ದು, ಇಲಾಖೆಯ ಕಚೇರಿಗಳಲ್ಲಿ ಸಮಯ ಪರಿಪಾಲನೆಯೊಂದಿಗೆ ಪರಿಶುದ್ಧ ಪಾರದರ್ಶಕ ಆಡಳಿತವನ್ನು ಒದಗಿಸಿದಾಗ ಮಾತ್ರ ಎಲ್ಲಾ ಹಂತಗಳಲ್ಲಿ ಯಶಸ್ಸು ಎದ್ದು ಕಾಣುತ್ತದೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವೈಯಕ್ತಿಕ ಕುಂದುಕೊರತೆಗಳ ನಿವಾರಣೆಗಾಗಿ ಶೀಘ್ರವಾಗಿ ಕಡತಗಳನ್ನು ನಿಯಮಾನುಸಾರ ವಿಲೇವಾರಿ ಮಾಡುವ ಜಾಯಮಾನವನ್ನು ಬೆಳೆಸಿಕೊಳ್ಳಬೇಕು ಎಂದೂ ಮೇಜರ್ ಹಿರೇಮಠ ಹೇಳಿದರು.
ಪ್ರಭಾರಿ ಜಂಟಿ ನಿರ್ದೇಶಕ ಮೃತ್ಯುಂಜಯ ಕುಂದಗೋಳ, ಹಿರಿಯ ಸಹಾಯಕ ನಿರ್ದೇಶಕ ಕೇಶವ ಪೆಟ್ಲೂರ ಸೇರಿದಂತೆ ವಿವಿಧ ಹಂತಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.