*ದಿಂಗಾಲೇಶ್ವರ ಶ್ರೀ ಹೇಳಿಕೆಯಿಂದ ಹಲವು ಶ್ರೀಗಳಿಗೆ ಇರಿಸು ಮುರಿಸು*
ಹುಬ್ಬಳ್ಳಿ ಮೂರು ಸಾವಿರ ಮಠದ ಸ್ವಾಮೀಜಿಯೂ ಯೂಟರ್ನ್ !
*ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಪ್ರಕಟಣೆ*
*ಪ್ರಹ್ಲಾದ ಜೋಶಿಗೆ ನಾವು ವಿರೋಧವನ್ನು ಮಾಡಿರುವುದಿಲ್ಲ*
*ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜೊತೆಗೆ ಉತ್ತಮ ಸಂಬಂಧವಿದೆಯೆಂದು ಹೇಳಿಕೆ*
ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಹುಬ್ಬಳ್ಳಿಯ
ಶ್ರೀ ಜಗದ್ಗುರು ಮೂರುಸಾವಿರಮಠದಲ್ಲಿ ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಶ್ರೀ ನಡೆಸಿದ ಸಭೆಯ ಸರ್ವ ಸಮ್ಮತ ನಿರ್ಧಾರ ನಾಡಿನ ಹಲವು ಮಠಾಧೀಶರಿಗೆ ಇರಿಸುಮುರಿಸು ತಂದಿದೆ.
ಇದಕ್ಕೆ ಹಲವಾರು ಶ್ರೀ ಗಳು ಬಹಿರಂಗವಾಗಿ ಸ್ಪಷ್ಟನೆ ನೀಡುತ್ತಿದ್ದು, ನಿನ್ನೆ ಧಾರವಾಡದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿಕೆ ಬೆನ್ನಲ್ಲೇ ಇಂದು ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಸ್ಪಷ್ಟನೆ ಹೊರಬಿದ್ದಿದೆ.
ಯಾವಾಗಲೂ ರಾಜಕೀಯ ಅಂತರವನ್ನು ಕಾಯ್ದುಕೊಂಡು ಬಂದಿರುತ್ತದೆ. ಎಲ್ಲಾ ರಾಜಕೀಯ ಪಕ್ಷಗಳನ್ನು ಸಮಾನವಾಗಿ ಕಾಣುತ್ತಾ ಬಂದಿದೆ ಎಂದು ಮೂರು ಸಾವಿರ ಮಠದ ಪೀಠಾಧಿಪತಿ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಶ್ರೀಮಠಕ್ಕೆ ಆಗಮಿಸಿ ಆಶೀರ್ವಾದ ತೆಗೆದುಕೊಂಡು ಹೋಗುತ್ತಾರೆ. ಸರ್ವರನ್ನು ಸಮಭಾವದಿಂದ ಕಾಣುವುದು ಶ್ರೀ ಮಠದ ಸದ್ಭಾವನೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಯಾವಾಗಲೂ ಶ್ರೀ ಮಠವು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಕೊಟ್ಟಿರುವುದಿಲ್ಲ ಮತ್ತು ಕೊಡುವುದಿಲ್ಲ.
ಈ ಸಂದರ್ಭದಲ್ಲಿ ಅದನ್ನು ನಾವು ಕಾಯ್ದುಕೊಂಡು ಬಂದಿರುತ್ತೇವೆ.
ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದರೆ ಆ ಪಕ್ಷದ ಕಾರ್ಯಕರ್ತರು ಮತ್ತು ವರಿಷ್ಠರಿಗೆ ಸಂಬಂಧಪಟ್ಟದ್ದು ಇರುತ್ತದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಹ್ಲಾದ ಜೋಶಿ ಅವರಿಗೆ ಯಾವುದೇ ವಿರೋಧವನ್ನು ನಾವು ಮಾಡಿರುವುದಿಲ್ಲ. ಅವರ ಮತ್ತು ನಮ್ಮ ನಡುವೆ ವೈಯಕ್ತಿಕವಾಗಿ ಬಾಂಧವ್ಯವು ತುಂಬಾ ಚೆನ್ನಾಗಿದೆ.
ಪ್ರಹ್ಲಾದ್ ಜೋಶಿ ಅವರು ಕೂಡಾ ಶ್ರೀಮಠದೊಡನೆ ಸೌಹಾರ್ದಯುತವಾಗಿ ಸದಾ ಭಕ್ತಿ ಭಾವದಿಂದ ನಡೆದುಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.