ಅಡಿಟ್ ಕಮಿಟಿಯಿಂದ ತನಿಖೆ
ಡಿಎಚ್ಓ ಡಾ.ಯಶವಂತ ಮದೀನಕರ
ಹುಬ್ಬಳ್ಳಿ prajakiran.com :
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ 5 ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಆರೋಪ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿಸಿಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನೂ ಸೋಂಕಿತರ ಸಾವಿನ ಬಗ್ಗೆ ವೈದ್ಯಕೀಯ ತನಿಖೆಯ ನಂತರವೇ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಡಿಸಿಪಿ ಹೇಳಿದರೆ, ಡಿಹೆಚ್ಓ ಯಶವಂತ ಮದನಿಕರ್ ಪ್ರತಿಕ್ರಿಯೆ ನೀಡಿದ್ದು, ಬಹಳ ಜನ ಆಕ್ಸಿಜನ್ ನಿಂದ ಸಾವಾಗಿದೆ ಎನ್ನುತ್ತಿದ್ದಾರೆ.
ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ಬಹುದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆ ಹಾಗೂ ಮೂರು ಜನ ಪುರುಷರು ಸೇರಿ 5 ಜನ ಕೋವಿಡ್ ಸೋಂಕಿತರು ಇಂದು ಸಂಜೆ ಮೃತರಾಗಿದ್ದಾರೆ.
ಆಸ್ಪತ್ರೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆಕ್ಸಿಜನ್ ಸೌಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದೀನಕರ ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಸ್ವತಃ ಬಂದು ಆಸ್ಪತ್ರೆಯಲ್ಲಿ ಪರಿಶೀಲನೆ ಮಾಡಲಾಗಿದ್ದು, ಆಕ್ಸಿಜನ್ ಕೊರತೆ ಆಗಿರುವುದು ಕಂಡಿಬಂದಿಲ್ಲ ಎಂದು ಹೇಳಿದ್ದಾರೆ.
ಲೈಫ್ ಲೈನ್ ಆಸ್ಪತ್ರೆಯಲ್ಲಿ ಒಟ್ಟು 21 ಜನ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ 30 ಜಂಬೂ ಸಿಲಿಂಡರ್ ಇವೆ. 2 ಕೆಎಲ್ ಸಾಮರ್ಥ್ಯದ ಒಂದು ಆಕ್ಸಿಜನ್ ಕಂಟೇನರ್ ಇದೆ. ಹಾಗೂ ನೈಸರ್ಗಿಕವಾಗಿ ಗಾಳಿ ಬಳಸಿಕೊಂಡು ಪ್ರತಿ ನಿಮಿಷಕ್ಕೆ 85 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದಿಸುವ
(O2 ಕಾನ್ಸ್ ನ್ ಟ್ರೇಟೆಡ್) ಘಟಕವನ್ನು ಲೈಫ್ ಲೈನ್ ಆಸ್ಪತ್ರೆ ಹೊಂದಿದೆ.
ಅಲ್ಲದೆ ಪ್ರತಿ ಐಸಿಯು ದಲ್ಲಿ ಆಕ್ಸಿಜನ್ ಕೊರತೆ ಉಂಟಾದಲ್ಲಿ ಎಚ್ಚರಿಸಲು ಅಲಾರಮಿಂಗ್ ಸಿಸ್ಟಮ್ ಸಹ ಅಳವಡಿಸಲಾಗಿದೆ ಎಂದು ವಿವರಿಸಿದ್ದಾರೆ.
ಆದ್ದರಿಂದ ಇಂದು ಸಂಭವಿಸಿರುವ ಕೋವಿಡ್ ಸೋಂಕಿತರ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ಮೃತರ ಸಾವು ಕುರಿತು ಡೆತ್ ಅಡಿಟ್ ಕಮಿಟಿಯಿಂದ ತನಿಖೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದೀನಕರ ಅವರು ತಿಳಿಸಿದ್ದಾರೆ.