ಧಾರವಾಡ prajakiran.com : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದ ಕೋಶಾಧ್ಯಕ್ಷರಾಗಿದ್ದ ಪ್ರತಿಭಾ ಡಿ. ರಾಣೆ ಅವರು ಭಾನುವಾರ ಕೋವಿಡ್ -19 ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದರು.
ಆ. 12 ರಂದು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಆರಂಭದಲ್ಲಿ ನಿಮೋನಿಯಾ ಕಾಣಿಸಿಕೊಂಡಿತ್ತು.
ಆನಂತರ ಉಸಿರಾಟದ ತೊಂದರೆ ಹೆಚ್ಚಾಗಿ ಲೋ ಬಿಪಿ ಮತ್ತು ಇತರೆ ಕಾರಣದಿಂದಾಗಿ ಚೇತರಿಕೆ ಕಾಣದೆ ವಿಧಿವಶರಾಗಿದ್ದಾರೆ.
ಧಾರವಾಡ ಜಿಲ್ಲಾ ಸಹಕಾರಿ ಇಲಾಖೆ ಲೆಕ್ಕಪರಿಶೋಧಕಿಯಾಗಿದ್ದ ಅವರು ಇತ್ತೀಚೆಗೆ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ನೌಕರರ ಕ್ರೀಡಾಕೂಟವನ್ನು ಸಮರ್ಥವಾಗಿ ಸಂಘಟಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅವರ ಆತ್ಮಕ್ಕೆ ಚಿರಶಾಂತಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಪರಮಾತ್ಮ ನೀಡಲೆಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಫ್ ಸಿದ್ಧನಗೌಡರ, ಪ್ರಧಾನ ಕಾರ್ಯದರ್ಶಿ ಎಸ್.ಜಿ ಸುಬ್ಬಾಪೂರಮಠ, ಗೌರವಾಧ್ಯಕ್ಷ ಆರ್.ಬಿ ಲಿಂಗದಾಳ ಹಾಗೂ ಪದಾಧಿಕಾರಿಗಳು, ಸಮಸ್ತ ನೌಕರರ ವರ್ಗ ಪ್ರಾರ್ಥಿಸಿದ್ದಾರೆ.