ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ ಧಾರವಾಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಎರಡನೇ ಬಾರಿಗೆ ಸಿಬಿಐ ವಿಚಾರಣೆ ಎದುರಿಸಿದರು.
ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಶನಿವಾರ ಸಂಜೆ ಆಗಮಿಸಿ ಸಿಬಿಐ ಅಧಿಕಾರಿಗಳ ಎದುರು ಸುಮಾರು 40 ನಿಮಿಷಗಳ ಕಾಲ ವಿಚಾರಣೆ ಎದುರಿಸಿದರು.
ವಿಚಾರಣೆ ವೇಳೆ ಸಿಬಿಐ ಅಧಿಕಾರಿಗಳು ಕೇಳಿದ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದರು ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ಶಿಗ್ಗಾಂವಿಯ ಕಾಂಗ್ರೆಸ್ ಮುಖಂಡ ಶಿವಯೋಗಿ ಹಿರೇಮಠ ಅವರನ್ನು ಬೆಳಗ್ಗೆಯಿಂದಲೇ ವಿಚಾರಣೆಗೆ ಒಳಪಡಿಸಿದ್ದರು.
ಕಳೆದ ಮೂರು ದಿನಗಳಿಂದ ಸತತವಾಗಿ ವಿಚಾರಣೆಗೆ ಹಾಜರಾಗುತ್ತಿರುವ ಶಿವಯೋಗಿ ಹಿರೇಮಠ ಹಾಗೂ ಶುಕ್ರವಾರವಷ್ಟೇ ವಿಚಾರಣೆ ಎದುರಿಸಿದ್ದ ಹುಬ್ಬಳ್ಳಿಯ ಮಹಿಳೆಯೊಬ್ಬರು ಶನಿವಾರ ಎರಡನೇ ಬಾರಿಗೆ ಸಿಬಿಐ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿರುವುದನ್ನು ಇಲ್ಲಿ ಗಮನಿಸಬಹುದು.
ಈ ಮೂವರನ್ನು ಸಿಬಿಐ ಅಧಿಕಾರಿಗಳ ತಂಡ ಮೊದಲು ಪ್ರತ್ಯೇಕ ಹಾಗೂ ಆನಂತರ ಒಟ್ಟಿಗೆ ವಿಚಾರಣೆ ನಡೆಸಿರುವ ಸಾಧ್ಯತೆಗಳಿವೆ.
ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಬೆಂಗಳೂರು ಸಿಬಿಐ ಕಚೇರಿಗೆ ಹಾಜರಾಗಿ ವಿಜಯ ಕುಲಕರ್ಣಿ ವಿಚಾರಣೆ ಎದುರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.