ಧಾರವಾಡ prajakiran.com : ಧಾರವಾಡ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕಿ ಮಮತಾ ನಾಯಕ ಸೋಮವಾರ ವೀಕ್ಷಣೆ ಮಾಡಿದರು.
ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಜಿಲ್ಲೆಯ ವಿದ್ಯಾಗಮ ಕಾರ್ಯಕ್ರಮದ ಅನುಷ್ಠಾನದ ಕುರಿತು ಸಮಗ್ರ ಮಾಹಿತಿಯನ್ನು ಪಡೆದು ಮಾರ್ಗದರ್ಶನ ಮಾಡಿದರು.
ನಂತರ ಧಾರವಾಡ ಗ್ರಾಮೀಣ ವಲಯದ ಕೆಜಿಎಸ್ ನರೇಂದ್ರ ಹಾಗೂ ಜಿಹೆಚ್ಎಸ್ ಚಿಕ್ಕಮಲ್ಲಿಗವಾಡ ಶಾಲೆಗಳ ವೀಕ್ಷಣೆ ಮಾಡಿದರು.
ಗ್ರಾಮೀಣ ಮಕ್ಕಳು ಬಹಳ ಉತ್ಸಾಹದಿಂದ ಕಲಿಕಾ ಕೇಂದ್ರಗಳಲ್ಲಿ ಭಾಗವಹಿಸಿರುವುದು ಹಾಗೂ ಊರಿನ ಜನರ ಸಹಕಾರದಿಂದ ಕಲಿಕಾ ಕೇಂದ್ರಗಳು ನಡೆಯುತ್ತಿರುವುದನ್ನು ನಿರ್ದೇಶಕರು ಶ್ಲಾಘಿಸಿದರು.
ಮಕ್ಕಳು ಕೋವಿಡ್-೧೯ ಸಂಧಿಗ್ದ ಪರಿಸ್ಥಿತಿಯಲ್ಲಿಯೂ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು.
ನಂತರ ಧಾರವಾಡ ಶಹರ ವಲಯದ ಮಾದರಿ ಪ್ರಾಥಮಿಕ ಶಾಲೆ ಪಿಹೆಚ್ಕ್ಯೂ ಶಾಲೆಯ ದುರ್ಗಾದೇವಿ ದೇವಸ್ಥಾನದಲ್ಲಿರುವ ಕಲಿಕಾ ಕೇಂದ್ರಗಳನ್ನು ವೀಕ್ಷಿಸಲಾಯಿತು.
ಒಳ್ಳೆಯ ವಾತಾವರಣದಲ್ಲಿ ಸಾಮಾಜಿಕ ಅಂತರದಲ್ಲಿ ಅಭ್ಯಾಸ ಹಾಳೆಗಳನ್ನು ನೀಡಿ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿರುವುದನ್ನು ವೀಕ್ಷಿಸಿದರು.
ಮಕ್ಕಳು ದೀಕ್ಷಾ ಪೋರ್ಟಲ್ ಮೂಲಕ ಸಂವೇದ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿರುವುದನ್ನು ಕಂಡು ನಿರ್ದೇಶಕರು ಹರ್ಷ ವ್ಯಕ್ತ ಪಡಿಸಿದರು. ಅದೇ ರೀತಿ ಟಿಟಿಐ ಡಯಟ್ ಶಾಲೆಯ ರಕ್ಷಾ ಕಾಲೊನಿ ಹನುಮಾನ ದೇವಸ್ಥಾನದಲ್ಲಿ ನಡೆದ ಕಲಿಕಾ ಕೇಂದ್ರ ವೀಕ್ಷಿಸಿದರು.
ಅಲ್ಲಿ ಸ್ವಯಂ ಸೇವಕರು ಭಾಗವಹಿಸಿದ್ದನ್ನು ಕಂಡು ಅವರಿಗೆ ಇಲಾಖೆ ಪರವಾಗಿ ಧನ್ಯವಾದ ತಿಳಿಸಿದರು. ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಾದ್ಯಂತ ವಿದ್ಯಾಗಮ ಕಾರ್ಯಕ್ರಮ ಉತ್ತಮವಾಗಿ ಅನುಷ್ಠಾನಗೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಶನ ಸಮಯದಲ್ಲಿ ಸಾ.ಶಿ ಇಲಾಖೆಯ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ, ಡಿವೈಪಿಸಿ ಪ್ರಮೋದ ಮಹಾಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಎನ್ ಎಸ್ ಧಪೇದಾರ, ಎಂ ವಿ ಅಡಿವೇರ ಹಾಜರಿದ್ದರು.