ಧಾರವಾಡ prajakiran.com : ಜಿಲ್ಲೆಯಲ್ಲಿನ ಮಳೆ ಮತ್ತು ನೆರೆ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದರು.
ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ಕೆಲವು ಭಾಗಗಳಲ್ಲಿನ ನೆರೆ ಹಾವಳಿಯಿಂದ ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ವಿಶೇಷವಾಗಿ ರೈತರ ಹೊಲದಲ್ಲಿನ ಬೆಳೆಗಳು ನಾಶವಾಗಿದ್ದು, ರೈತರನ್ನು ಮತ್ತಷ್ಟು ಸಂಕಷ್ಟದ ಜಾಲಕ್ಕೆ ನೂಕಿದೆ.
ಧಾರವಾಡ ಜಿಲ್ಲೆಯಲ್ಲಿ ಹರಿಯುವ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳಗಳ ಇಕ್ಕೆಲೆಗಳಲ್ಲಿನ ಹೊಲದಲ್ಲಿನ ಬೆಳೆ ನಾಶವಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತ್ತನೆ ಮಾಡಿದ್ದ ಅಂದಾಜು ೬೦ ಸಾವಿರ ಹೆಕ್ಟೇರ್ ಜಮೀನಿನಲ್ಲಿನ ಹೆಸರು, ಹತ್ತಿ, ಮೆಕ್ಕೆಜೊಳ, ಶೇಂಗಾ ಮತ್ತು ಟೊಮ್ಯಾಟೊ, ಈರುಳ್ಳಿ, ಮೆಣಸಿನಕಾಯಿ, ಆಲೂಗಡ್ಡೆ ಸೇರಿದಂತೆ ಇನ್ನಿತರ ತೋಟಗಾರಿಕಾ ಬೆಳೆಗಳು ಪ್ರವಾಹಕ್ಕೆ ಆಹುತಿಯಾಗಿವೆ ಎಂದು ಆರೋಪಿಸಿದರು.
ಇದೇ ರೀತಿ ಜಿಲ್ಲೆಯಲ್ಲಿನ ಇಂದಿರಮ್ಮನ ಕೆರೆ, ನೀರಸಾಗರ ಕೆರೆ ಸೇರಿದಂತೆ ರಸ್ತೆಗಳು ಕೊಚ್ಚಿಹೋಗಿವೆ. ಬೆಳ ಹಾಳಾಗಿವೆ. ಆದರೆ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಶೆಟ್ಟರ್, ಕಂದಾಯ ಸಚಿವ ಆರ್. ಅಶೋಕ ಭೇಟಿ ನೀಡದೆ ಬೆಂಗಳೂರು ಹಾಗೂ ಕೋವಿಡ್ ಗೆ ಸೀಮಿತವಾಗಿದ್ದಾರೆ ಎಂದು ದೂರಿದರು.
ಪ್ರತಿವರ್ಷ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳಗಳ ಅವಘಡ ಸಂಭವಿಸಿದರೂ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ.
ಇಂತಹಅನಾಹುತ ತಪ್ಪಿಸುವುದರ ಜೊತೆಗೆ ಹರಿದು ಹೋಗುವ ನೀರು ತಡೆದು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಒಟ್ಟು ೨೪ ಟಿ.ಎಂ.ಸಿ. ನೀರನ್ನು ಯೋಜನಾಬದ್ಧವಾಗಿ ಬಳಸಿಕೊಳ್ಳಬಹುದು ಎಂದರು.
ಕಾಂಗ್ರೆಸ್ ಮುಖಂಡರಾದ ಸ್ವಾತಿ ಮಾಳಗಿ, ಮಂಜುನಾಥ ಭೋವಿ. ಎಸ್.ಎ.ಪವಾರ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.