ಧಾರವಾಡ prajakiran.com : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮಂಜುಳಾ ಆಗ್ರಹಿಸಿದ್ದಾರೆ.
2020-2025 ನೇ ಸಾಲಿನ ಅವಧಿಗಾಗಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಚುನಾವಣೆ ಪ್ರಕ್ರಿಯೆ ದೋಷಪೂರಿತವಾಗಿದೆ.
ನಿವೃತ್ತ ಅಧಿಕಾರಿಗಳನ್ನು ಚುನಾವಣಾ ಅಧಿಕಾರಿಗಳಾಗಿ ನೇಮಿಸಿಕೊಂಡಿದ್ದು, ಇಲಾಖೆಗೂ ಅವರಿಗೂ ಸಂಬಂಧವಿಲ್ಲ. ಅವರು ಮನಬಂದಂತೆ ಚುನಾವಣೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಪ್ರತಿಸಲ ಚುನಾವಣೆ ನಡೆಸುವಾಗ ಕೇಂದ್ರದ ರಾಜ್ಯ ಹಂತದಲ್ಲಿ, ರಾಜ್ಯ ನಿರ್ದೇಶಕರು, ಜಿಲ್ಲಾ ಹಂತದಲ್ಲಿ, ಉಪ ನಿರ್ದೇಶಕರು, ತಾಲೂಕು ಹಂತದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು ಚುನಾವಣಾ ಅಧಿಕಾರಿಗಳು ಆಗಿರುತ್ತಿದ್ದರು.
ಆದರೆ ಈ ಸಲ ಈ ನಿಯಮ ಪಾಲಿಸಿಲ್ಲ ಎಂದು ಆರೋಪಿಸಿದರು. ಸದಸ್ಯತ್ವ ಹಣ ವೇತನದಲ್ಲಿ ಕಟಾವಣೆ ಮಾಡಿದರೂ ಸಹ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ. ಉಮೇದುವಾರಿಕೆ ಸಲ್ಲಿಸುವ ಶಿಕ್ಷಕರು ಗೊಂದಲದಲ್ಲಿ ಹಾಗೂ ಭಯದಲ್ಲಿದ್ದಾರೆ ಎಂದು ದೂರಿದರು.
ಇವೆಲ್ಲಾ ಅಂಶ ಮನಗಂಡು ಸರ್ಕಾರ ಚುನಾವಣಾ ಪ್ರಕ್ರಿಯೆ ಸ್ಥಗಿತ ಗೊಳಿಸುವಂತೆ ಸೂಚಿಸಿದರೂ ಆದೇಶ ಪಾಲಿಸುತ್ತಿಲ್ಲ. ಚುನಾವಣೆ ನಡೆಸುವುದಾದರೆ ಮೇಲಿನ ನ್ಯೂನತೆ ಸರಿಪಡಿಸಿಕೊಂಡು ಚುನಾವಣೆ ನಡೆಸಬೇಕು.
ಇಲ್ಲದಿದ್ದರೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಹೋರಾಟಕ್ಕೆ ಇಳಿಯಲಾಗುವುದೆಂದು ಎಚ್ಚರಿಸಿದರು.
ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಶಿಕ್ಷಕರ ಸಂಘದ ಚುನಾವಣೆ ನಡೆದು ಇತರರಿಗೆ ಮಾದರಿಯಾಗಿ ಉಳಿಯಬೇಕಾಗಿದ್ದ ಶಿಕ್ಷಕರ ಸಂಘದ 2020-25 ನೇ ಸಾಲಿನ ಚುನಾವಣೆ ಸಂಘರ್ಷ ಕ್ಕೆ ದಾರಿಯಾಗಿರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.
2020-25 ನೇ ಅವಧಿಯ ಶಿಕ್ಷಕರ ಸಂಘದ ಚುನಾವಣೆಗೆ ಮಹಿಳಾ ಮೀಸಲಾತಿ ಅಡಿಯಲ್ಲಿ ಸ್ಪರ್ಧಿಸಲು ಇಚ್ಚಿಸುವ ಮಹಿಳಾ ಶಿಕ್ಷಕಿಯರಿಗೆ ಬೆದರಿಕೆಯ ಕರೆಗಳು ಬರುವುದನ್ನು ಈ ಮೂಲಕ ಖಂಡಿಸಿದರು.
ಶಿಕ್ಷಕರ – ಶಿಕ್ಷಕರ ಮಧ್ಯೆ ಉಂಟಾದ ಕಂದಕಗಳು ದೂರವಾಗಲು ತಕ್ಷಣವೇ ಶಿಕ್ಷಕರ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಸ್ನೇಹ ಸೌಹಾರ್ದತೆಯಿಂದ ಚುನಾವಣೆ ನಡೆಯಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.