ಜನಜಾಗೃತಿ ಸಂಘದ ಮತ್ತೊಂದು ಹೋರಾಟಕ್ಕೆ ಭಾರೀ ಜಯ
ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ತುಂಬು ಹೃದಯದಿಂದ ಧನ್ಯವಾದ
ಧಾರವಾಡ ಎನ್.ಎ. ಮುತ್ತಣ್ಣ ಸ್ಮಾರಕ ಪೋಲಿಸ್ ಮಕ್ಕಳ ವಸತಿ ಶಾಲೆ ಪುನರ್ ನಿರ್ಮಾಣಕ್ಕೆ 2 ಕೋಟಿ ಮಂಜೂರು
ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ರಾಜ್ಯದ ಏಕೈಕ (ಎನ್.ಎ. ಮುತ್ತಣ್ಣ ಸ್ಮಾರಕ) ಪೊಲೀಸ್ ಮಕ್ಕಳ ವಸತಿ ಶಾಲೆ ಮಕ್ಕಳ ವಸತಿ ನಿಲಯಗಳನ್ನು ನಿರ್ಮಿಸಲು ಹಾಗೂ ಶಾಲೆ ಪುನರ್ ನಿರ್ಮಾಣ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ತಮ್ಮ ಗಣಿ ಮತ್ತು ಕಲ್ಲಿದ್ದಲು ಖಾತೆ ಅಧೀನದಲ್ಲಿ ಬರುವ ಕೋಲ್ ಇಂಡಿಯಾ ಕಂಪನಿಯ ಸಿಎಸ್ ಆರ್ ಅಡಿ 2 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ.
1997ರಲ್ಲಿ ಧಾರವಾಡದಲ್ಲಿ ಆರಂಭಗೊಂಡ ಈ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಸರಕಾರ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ಗುಣಾತ್ಮಕ ಶಿಕ್ಷಣ ನೀಡುತ್ತ ಬಂದಿತ್ತು.
ಸದ್ಯ ಇಲ್ಲಿರುವ ವಸತಿ ನಿಲಯಗಳ ಕಟ್ಟಡ ಶಿಥಿಲಗೊಂಡಿದ್ದು ನೂತನ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಇಲ್ಲಿನ ಪೋಲಿಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಎಂ. ಬ್ಯಾಕೋಡ್ ಇವರು ಕಳೆದ ತಿಂಗಳು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದರು.
ಈ ಮನವಿಗೆ ತಕ್ಷಣ ಸ್ಪಂದನೆ ನೀಡಿದ ಸಚಿವ ಜೋಶಿಯವರು ತಮ್ಮ ಅಧೀನದಲ್ಲಿ ಬರುವ ಕೋಲ್ ಇಂಡಿಯಾ ಕಂಪನಿಯ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಹಣ ಬಿಡುಗಡೆ ಮಾಡುವಂತೆ ಕೋರಿದ್ದರ ಮೇರೆಗೆ ಸಿಎಸ್ ಆರ್ ಅನುದಾನದಡಿ 2 ಕೋಟಿ ರೂಗಳನ್ನು ಮಂಜೂರು ಮಾಡಿದೆ ಎಂದು ಸಚಿವ ಜೋಶಿಯವರು ತಿಳಿಸಿದ್ದಾರೆ.
ಎರಡು ಹಂತದಲ್ಲಿ ಹಣ ಬಿಡುಗಡೆ ಮಾಡಲು ಒಡಂಬಡಿಕೆಯಾಗಿದ್ದು, ಮೊದಲ ಹಂತದಲ್ಲಿ 1 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆ.
ಎರಡನೇ ಹಂತದಲ್ಲಿ ಇನ್ನುಳಿದ 1 ಕೋಟಿ ಹಣವನ್ನು ಬಿಡುಗಡೆ ಮಾಡಲು ಒಡಂಬಡಿಕೆಯಲ್ಲಿ ತಿಳಿಸಲಾಗಿದೆ.
ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ, ಅಗ್ನಿಶಾಮಕದಳ ಹಾಗೂ ಖಾಯಂ ಗೃಹರಕ್ಷಕ ದಳದ ಸಿಬ್ಬಂದಿ ವರ್ಗದವರ ಮಕ್ಕಳಿಗಾಗಿ (ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ತಲಾ 25 ವಿಧ್ಯಾರ್ಥಿಗಳಿಗೆ) ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಪ್ರವೇಶ ನೀಡಲಾಗುತ್ತದೆ.
ಕಳೆದ 24 ವರ್ಷಗಳಿಂದ ಮಕ್ಕಳ ವಸತಿ ಶಾಲೆಯು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಎಸ್.ಎಸ್. ಎಲ್.ಸಿ ಯಲ್ಲಿ ಉತ್ತಮ ಫಲಿತಾಂಶ ಹೊಂದಿದೆ.
ಈ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ವಿಷಯ ಹಾಗೂ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಸಚಿವ ಜೋಶಿಯವರು ಈ ಭಾಗದಲ್ಲಿ ಇದೊಂದು ಮಾದಿರಿ ಶಾಲೆಯನ್ನಾಗಿ ಮಾಡಲು ಕಂಕಣಬದ್ದರಾಗಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಶಾಲೆ ಮುಚ್ಚುವ ಹುನ್ನಾರ ನಡೆದಿದೆ ಎಂಬ ಅಪವಾದಗಳು ಕೇಳಿಬಂದಿದ್ದವು.
ಆ ಸಮಯದಲ್ಲಿ ಪೊಲಿಸ್ ಹಕ್ಕುಗಳ ಹೋರಾಟಗಾರ ಬಸವರಾಜ ಕೊರವರ ನೇತೃತ್ವದ ಜನಜಾಗೃತಿ ಸಂಘದ ಸದಸ್ಯರುಗಳು ಈ ಶಾಲೆಯ ಹಳೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ಸಂಘಗಳು ಶಿಕ್ಷಕರ ಪರವಾಗಿ ನಿಂತು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದವು.
ಇದೇ ಸಮಯದಲ್ಲಿ ಬಸವರಾಜ ಕೊರವರ ಅವರು ಶಾಲೆ ಉಳಿವಿಗೆ ಬೆಂಬಲವಾಗಿ ನಿಂತು ಸಚಿವ ಜೋಶಿಯವರನ್ನು ಭೇಟಿಮಾಡಿ ಮನವಿ ಸಲ್ಲಿಸಿದ್ದನ್ನು ಜೋಶಿಯವರು ನೆನಪಿಸಿಕೊಂಡಿದ್ದಾರೆ.
ಈ ಹೋರಾಟದ ಹಿನ್ನೆಲೆಯಲ್ಲಿ ಸಚಿವ ಜೋಶಿಯವರು ಬಸವರಾಜ ಹೊರಟ್ಟಿಯವರೊಂದಿಗೆ ಮಾತುಕತೆ ನಡೆಸಿ ಶಾಲೆಯ ಸಮಸ್ಯೆ ಬಗೆಹರಿಸಲು ಕೋರಿದ್ದರು.
ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಹಲವಾರು ಅಡ್ಡಿ-ಆತಂಕಗಳು ಎದುರಾಗುತ್ತವೆ. ಇಂಥ ಸಂದರ್ಭದಲ್ಲಿ ಉತ್ತಮವಾಗಿ ಇರುವ ಶಿಕ್ಷಣ ಸಂಸ್ಥೆಗಳನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಬೇಕಾಗುತ್ತದೆ.
ಹೀಗಾಗಿ ಧಾರವಾಡದ ಮುತ್ತಣ್ಣ ಪೊಲೀಸ್ ಮಕ್ಕಳ ವಸತಿ ಶಾಲೆಯನ್ನು ಪುನಶ್ವೇತನಗೊಳಿಸಲು ಕಂಕಣಬದ್ದನಾಗಿದ್ದೇನೆ ಎಂದು ಸಚಿವ ಪ್ರಹ್ಲಾದ ಜೋಶಿಯವರು ಹೇಳಿದ್ದಾರೆ.
ಮುತ್ತಣ್ಣ ವಸತಿ ಶಾಲೆಯನ್ನು ಪುನಕ್ಷೇತನಗೊಳಿಸಲು ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲುಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ನೆರವನ್ನು ನೀಡಲು ಸಿದ್ದನಿದ್ದೇನೆ ಎಂದು
ತಿಳಿಸಿರುವ ಜೋಶಿ, ಈ ಶಾಲೆಯಲ್ಲಿನ ಮಕ್ಕಳ ಫಲಿತಾಂಶ ಉತ್ತಮವಾಗಿದೆ. ಶಾಲೆಯನ್ನು ಖಾಸಗಿ ಸಂಸ್ಥೆಗಳಆರ್ಥಿಕ ನೆರವಿನಿಂದ ಇನ್ನಷ್ಟು ಅಭಿವೃದ್ಧಿ ಪಡಿಸುವ ಉದ್ದೇಶ ನನಗಿದೆ.
ಆದ್ದರಿಂದ ಈ ಶಾಲೆಯನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ ಎಂದು ಸಚಿವ ಜೋಶಿಯವರು ಹೇಳಿದ್ದಾರೆ.
ತಮ್ಮ ಕೋರಿಕೆಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಲು ಶ್ರಮವಹಿಸಿದ ಸಚಿವ ಜೊಶಿಯವರನ್ನು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ್ ಕೊರವರ್ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ತುಂಬು ಹೃದಯದಿಂದ ಸಂಸದ ಪ್ರಹ್ಲಾದ ಜೋಶಿಯವರಿಗೆ ಧನ್ಯವಾದ ಸಲ್ಲಿಸುತ್ತೇವೆ.
ಇದರೊಂದಿಗೆ ನಮ್ಮ ಸಂಘದ ಹೋರಾಟಕ್ಕೆ ಸಹಕರಿಸಿದ ಸುವರ್ಣ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ಮಾಡಿ ಶಾಲೆ ಉಳಿಸಲು ಸಹಕರಿಸಿದ ಜಯಪ್ರಕಾಶ ಶೆಟ್ಟಿ ಉಪ್ಪಳ, ಗುರುರಾಜ ಹೂಗಾರ ಅವರ ತಂಡಕ್ಕೆ ನಮ್ಮ ಸಂಘದಿಂದ ಕೋಟಿ ಕೋಟಿ ವಂದನೆಗಳು.
ಈ ಹೋರಾಟಕ್ಕೆ ಕೈ ಜೋಡಿಸಿದ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಮುಖಂಡ ಶಿವಾನಂದ ಜೋಡಳ್ಳಿ ಮತ್ತು ಅವರ ಸಹಪಾಠಿಗಳಿಗೆ ನಮ್ಮೊಂದಿಗೆ ಗಟ್ಟಿಯಾಗಿ ನಿಂತ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರಿಗೂ ನಮ್ಮ ಧನ್ಯವಾದ ಎಂದು ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ತಿಳಿಸಿದರು.