ಧಾರವಾಡ prajakiran.com : ಕಳೆದ ಆಗಸ್ಟ್ ೫ ಮತ್ತು ೬ ರಂದು ಅತಿ ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯ ಗ್ರಾಮ ಮತ್ತು ನಗರ ವ್ಯಾಪ್ತಿಯಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ೧೨,೮೫೭ ಹೆಕ್ಟೆರ್ ಪ್ರದೇಶದ ಬೆಳೆ ಹಾನಿಯಾಗಿದೆ.
ಈ ಕುರಿತು ಸಮೀಕ್ಷಾ ವರದಿಯನ್ನು ಅಧಿಕಾರಿಗಳು ಶೀಘ್ರವಾಗಿ ಸಲ್ಲಿಸಬೇಕೆಂದು ಬೃಹತ್, ಮಧ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಸೂಚನೆ ನೀಡಿದರು.
ಅವರು ಗುರುವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಅತಿವೃಷ್ಟಿ ಹಾನಿ ಕುರಿತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದರು.
ಅಪಾರ ಮಳೆಯಿಂದಾಗಿ ವಿವಿಧ ಇಲಾಖೆಗಳಿಗೆ ಸೇರಿರುವ ಕಟ್ಟಡ, ರಸ್ತೆ, ಸೇತುವೆಗಳು ಮತ್ತು ರೈತರ ಬೆಳೆ, ಮನೆಗಳು ಹಾನಿಯಾಗಿವೆ ಇಲಾಖೆ ಮುಖ್ಯಸ್ಥರು ಹಾನಿ ವಿವಿರಗಳನ್ನು ಪರಿಶೀಲಿಸಿ ತಕ್ಷಣ ವರದಿ ಸಲ್ಲಿಸಬೇಕು.
ಸರಕಾರ ಅತಿವೃಷ್ಟಿ ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಈಗಾಗಲೇ ೫ ಕೋಟಿ ರೂ.ಬಿಡುಗಡೆ ಮಾಡಿದೆ. ಅಧಿಕಾರಿಗಳು ವಿವರವಾದ ವರದಿ ಸಲ್ಲಿಸಿದ ನಂತರ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.
ಕಳೆದ ಸಾಲಿನಲ್ಲಿ ಮನೆ ಹಾನಿಯಾದ ಫಲಾನುಭವಿಗಳಿಗೆ ಮನೆ ಪುನರ್ ನಿರ್ಮಾಣಕ್ಕೆ ವರ್ಗೀಕರಣದ ಅನುಗುಣವಾಗಿ ಪರಿಹಾರ ಹಣ ಬಿಡುಗಡೆ ಆಗುತ್ತದೆ. ಕಾಲಮಿತಿಯಲ್ಲಿ ಮನೆ ನಿರ್ಮಾಣ ಮುಗಿಸಿದರೆ ಪೂರ್ಣ ನೆರವು ದೊರೆಯುತ್ತದೆ.
ಅಧಿಕಾರಿಗಳು ಹಾನಿಯಾದ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ತಿ ಕಾರ್ಯವನ್ನು ಖುದ್ದು ಪರಿಶೀಲಿಸಿ, ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.