ರಾಜ್ಯ

ಧಾರವಾಡದ ಪ್ರವಾಹದಲ್ಲಿ ಸಿಲುಕಿದ್ದ 9 ಜನ, 495 ಕುರಿಗಳ ರಕ್ಷಣೆ

ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದ ಜೀವಹಾನಿ ಆಗಿಲ್ಲ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ prajakiran.com ಜು.23: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಲ್ಲಿಯವರೆಗೆ ಯಾವುದೇ ರೀತಿಯ ಜೀವಹಾನಿ ಉಂಟಾಗಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಇಂದು ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 9 ಜನರನ್ನು ಹಾಗೂ 495 ಕುರಿಗಳನ್ನು ರಕ್ಷಿಸಲಾಗಿದೆ. ಜಿಲ್ಲೆಯಲ್ಲಿ ನೆರೆ, ಪ್ರವಾಹ ಪರಿಹಾರ ಕೈಗೊಳ್ಳಲು ಯಾವುದೇ ಆರ್ಥಿಕ ಕೊರತೆ ಇಲ್ಲ. ಜಿಲ್ಲಾಡಳಿತದಲ್ಲಿ ಸುಮಾರು 1.61 ಕೋಟಿ ಹಣ ಇದೆ
ಎಂದರು.

ಮಳೆಹಾನಿ ಹಾಗೂ ಸಾರ್ವಜನಿಕರ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲು ತಾಲೂಕಾ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಕಾರ್ಯಕೈಗೊಳ್ಳುವ ಪ್ರತಿ ತಾಲೂಕಿಗೆ ಓರ್ವ ಜಿಲ್ಲಾಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ, ನಿರಂತರವಾಗಿ ನಿಗಾವಹಿಸಲಾಗಿದೆ.

ಗ್ರಾಮಮಟ್ಟದ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಮಳೆಯಿಂದ ತೊಂದರೆಗೊಳಗಾದ ಸಾರ್ವಜನಿಕರಿಗೆ ತಕ್ಷಣಕ್ಕೆ ನೆರವಾಗಲು ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಅಗತ್ಯ ಕ್ರಮ ವಹಿಸಲು ಆದೇಶಿಸಲಾಗಿದೆ.

ತಹಶೀಲ್ದಾರರು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿನ ತಗ್ಗು ಪ್ರದೇಶ, ಹಳ್ಳ ಮತ್ತು ತೊರೆಗಳ ಪಕ್ಕದ ಪ್ರದೇಶಗಳಲ್ಲಿ ಜಾಗೃತಿ ವಹಿಸುವಂತೆ ಖುದ್ದಾಗಿ ನಿಗಾವಹಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

*ಅಳ್ನಾವರ ತಾಲೂಕು* : ಅಳ್ನಾವರ ತಾಲೂಕಿನಲ್ಲಿರುವ ಹುಲಿಕೇರಿಯ ಇಂದಿರಮ್ಮನ ಕೆರೆಯ ಒಂದು ಭಾಗಕ್ಕೆ ನಿರ್ಮಿಸಿದ್ದ ತಡೆಗೋಡೆ ಸೋರಿಕೆಯಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹೊರಹೋಗುತ್ತಿದ್ದು, ಅಳ್ನಾವರ ಪಟ್ಟಣದ ತಗ್ಗು ಪ್ರದೇಶದಲ್ಲಿ ನೆರೆ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ಸುಮಾರು 200 ಕುಟುಂಬಗಳನ್ನು ಸ್ಥಳಾಂತರಗೊಳಿಸಲು ಕ್ರಮವಹಿಸಲಾಗಿದೆ.

ಮತ್ತು ಪಟ್ಟಣದ ಎರಡು ಸ್ಥಳಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಮತ್ತು ಅಗತ್ಯವಿದ್ದಲ್ಲಿ ಹೆಚ್ಚಿನ ಕಾಳಜಿ ಕೇಂದ್ರ ಆರಂಭಿಸಲು ಆರು ಸ್ಥಳಗಳನ್ನು ಗುರುತಿಸಲಾಗಿದೆ.

ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಬರುವ ಕುಂಬಾರಗಣವಿ ರಸ್ತೆ ಸಂಪರ್ಕ ಕಡಿತವಾಗಿದ್ದು, ಮಳೆ ಕಡಿಮೆಯಾದ ನಂತರ ಮತ್ತೆ ಸಂಚಾರಕ್ಕೆ ಮುಕ್ತವಾಗಲಿದೆ.

ಹಾಗೂ ಇಂದು ಬೆಳಿಗ್ಗೆ ಅತೀಯಾದ ಪ್ರವಾಹ ಬಂದಿದ್ದರಿಂದ ನಾಲ್ಕು ಜಾನುವಾರುಗಳು ನೀರಿನಲ್ಲಿ ಜಾರಿಹೋಗಿದ್ದು, ಮದ್ಯಾಹ್ನದ ನಂತರ ಮತ್ತೇ ಮರಳಿ ಬಂದಿವೆ ಎಂದು ಅವರು ತಿಳಿಸಿದರು.

ಹುಲಿಕೇರಿ ಇಂದಿರಮ್ಮನ ಕೆರೆ ದುರಸ್ತಿಗಾಗಿ ಮರುಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.

ಇನ್ನು ಎರಡ್ಮೂರು ದಿನಗಳವರೆಗೆ ನಿರಂತರವಾಗಿ ನಿಗಾವಹಿಸಿ ಅಗತ್ಯ ಕ್ರಮವಹಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಇದ್ದು, ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು

*ನವಲಗುಂದ ತಾಲೂಕು:* ನವಲಗುಂದ ತಾಲೂಕಿನ ಮೊರಬ-ಗುಮ್ಮಗೋಳ ರಸ್ತೆ ಬಂದ್ ಆಗಿರುವುದರಿಂದ ಬೆಣ್ಣೆಹಳ್ಳದಲ್ಲಿ ಇಂದು ಬೆಳಿಗ್ಗೆ 350 ಕುರಿಗಳು ಹಾಗೂ 8 ಜನ ಕುರಿಗಾರರು ಸಿಲುಕಿರುವ ಬಗ್ಗೆ ಮಾಹಿತಿ ಬಂದಿತ್ತು.

ತಕ್ಷಣ ಅಗ್ನಿಶಾಮಕ ದಳದವರು ಹಾಗೂ ತಹಶೀಲ್ದಾರರು ಕ್ರಮವಹಿಸಿ ಅವರೆಲ್ಲರನ್ನು ರಕ್ಷಿಸಿ ಸುರಕ್ಷಿತವಾಗಿ ಕಾಪಾಡಿದ್ದಾರೆ.

ಮತ್ತು ಸುಮಾರು 15 ಕುರಿಗಳು ನೀರಿನಲ್ಲಿ ತೇಲಿ ಹೋಗಿವೆ ಎಂದು ತಿಳಿದು ಬಂದಿದ್ದು, ಈ ಕುರಿತು ಪಶುಪಾಲನೆ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲಿಸಿ ತಕ್ಷಣ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.

*ಕುಂದಗೋಳ ತಾಲೂಕು* : ಕುಂದಗೋಳ ತಾಲೂಕಿನ ದೇವನೂರ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಸುಮಾರು 180 ಕುರಿಗಳನ್ನು ರಕ್ಷಿಸಲಾಗಿದೆ.

ಕೂಬಿಹಾಳ ಗ್ರಾಮದಲ್ಲಿ ಅತೀ ಮಳೆಯಿಂದಾಗಿ ಸುಮಾರು 20 ಮನೆಗಳ ಜನರನ್ನು ಸ್ಥಳಾಂತರಿಸಲಾಗಿದ್ದು, ಅವರ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ ಎಂದು ಅವರು ಹೇಳಿದರು.

*ಕಲಘಟಗಿ ಹಾಗೂ ಧಾರವಾಡ, ಹುಬ್ಬಳ್ಳಿ ತಾಲೂಕಿನಲ್ಲಿ* ಮಳೆ ನಿರಂತರವಾಗಿದ್ದು, ವಿವಿಧ ಗ್ರಾಮಗಳಲ್ಲಿ ಕೆಲವು ಮನೆಗಳು ಭಾಗಶ: ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ಹೆಚ್ಚಿನ ಹಾನಿ ಉಂಟಾಗಿರುವುದಿಲ್ಲ ಎಂದು ಅವರು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *