ಬೆಂಗಳೂರು prajakiran.com : ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಭಾಪತಿ ಡಾ.ವೀರಣ್ಣ ಮತ್ತಿಕಟ್ಟಿ ನೇತೃತ್ವದಲ್ಲಿಂದು ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಬೆಂಗಳೂರು ನಂತರ ಹುಬ್ಬಳ್ಳಿ – ಧಾರವಾಡ ಮಹಾನಗರಪಾಲಿಕೆ ಅತ್ಯಂತ ದೊಡ್ಡದು ಮತ್ತು ಜನಸಂಖ್ಯೆ ಕೂಡ.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಡಿ. ಜತ್ತಿಯವರು ಹುಬ್ಬಳ್ಳಿ – ಧಾರವಾಡವನ್ನು ಸೇರಿಸಿ ಮಹಾನಗರಪಾಲಿಕೆ ಮಾಡಿದರು .
ಅಂದು ಧಾರವಾಡದ ನಲವಡಿಯವರನ್ನು ಮಹಾಪೌರರನ್ನಾಗಿ ಮಾಡಲಾಗಿತ್ತು . ಇಂದಿನ ಪರಿಸ್ಥಿತಿಯು ಬಹಳ ಸುಧಾರಣೆಯಾಗಿದ್ದು , ಧಾರವಾಡ – ಹುಬ್ಬಳ್ಳಿ ಮಹಾನಗರ ಬಹಳಷ್ಟು ಬೆಳೆದಿದೆ .
1976 ರ ಕರ್ನಾಟಕ ಮುನ್ಸಿಪಾಲ್ ಕಾರ್ಪೊರೇಷನ್ ಅಧಿನಿಯಮ ಪ್ರಕಾರ ಒಂದು ಮಹಾನಗರಪಾಲಿಕೆ ಆಗಬೇಕಾದರೆ ಮೂರು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಹಾಗೂ ಆರು ಕೋಟಿ ರೂಗಳಷ್ಟು ಆದಾಯದ ಇರಲೇಬೇಕು.
ಆ ಪ್ರಕಾರ ಧಾರವಾಡ ಮಹಾನಗರಪಾಲಿಕೆ ಇಂದು ನಾಲ್ಕುವರೆ ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಮತ್ತು ರೂ . 37.31 ಕೋಟಿಗಿಂತಲೂ ಆದಾಯವನ್ನು ಹೊಂದಿದೆ .
ಎಲ್ಲಾ ರೀತಿಯಿಂದ ಪ್ರತ್ಯೇಕ ಮಹಾನಗರಪಾಲಿಕೆಯಾಗುವುದು ಹುಬ್ಬಳ್ಳಿ – ಧಾರವಾಡಕ್ಕೆ ಅತ್ಯಾವಶ್ಯವೆನಿಸಿದೆ .
ಧಾರವಾಡ ಪ್ರತ್ಯೇಕ ಪಾಲಿಕೆಯಾದಲ್ಲಿ , ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಿಗೆ ಪ್ರತ್ಯೇಕ ಅನುದಾನ ಲಭ್ಯವಾಗಿ ಕೆಳಕಂಡಂತೆ ಎರಡೂ ನಗರಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ.
ಧಾರವಾಡ ಮಹಾನಗರಕ್ಕೆ ತನ್ನದೇ ಆದ ಇತಿಹಾಸವಿದೆ . ಸಾಂಸ್ಕೃತಿಕ , ಸಾಹಿತ್ಯದಲ್ಲಿ ಇಡೀ ದೇಶದಲ್ಲೇ ಧಾರವಾಡ ಮುಂಚೂಣಿಯಲ್ಲಿದೆ .
ಭಾರತ ರತ್ನ ಡಾ. ಭೀಮಸೇನ ಜೋಶಿಯವರು ಅಂದಿನ ಧಾರವಾಡ ಜಿಲ್ಲೆಯ ರೋಣ ಹಾಗೂ ಗದಗಕ್ಕೆ ಸಂಬಂಧಿಸಿದಂತೆ ಕುಂದಗೋಳದಲ್ಲಿ ತಮ್ಮ ಸಂಗೀತ ಪಾಠಶಾಲೆಯನ್ನು ಪ್ರಾರಂಭಿಸಿ ಇಂದು ವಿಶ್ವದಲ್ಲೇ ಶ್ರೇಷ್ಟ ಸಂಗೀತಕಾರರಾಗಿ ಹೆಸರು ಪಡೆದಿದ್ದಾರೆ .
ಡಾ.ಮಲ್ಲಿಕಾರ್ಜುನ ಮನ್ಸೂರ್ ಅವರು , ಶ್ರೀ ಬಸವರಾಜ ಗುರು ಮತ್ತು ಡಾ.ಗಂಗೂಬಾಯಿ ಹಾನಗಲ್ ಇವರುಗಳು ಪದ್ಮಭೂಷಣಕ್ಕೆ ಭಾಜನರಾಗಿದ್ದಾರೆ .
ಇವರಂತೆಯೇ ಶ್ರೀ ಪಂಡಿತ್ ಮಾಧವ ಗುಡಿ ಸೇರಿದಂತೆ ಪದ್ಮಶ್ರೀ ಪಡೆದ ನೂರಾರು ಜನ ಸಂಗೀತ ದಿಗ್ಗಜರು ಕೂಡ ಧಾರವಾಡದಲ್ಲಿ ನೆಲೆಯೂರಿ ಧಾರವಾಡ ನಗರಕ್ಕೆ ಕೀರ್ತಿ ತಂದವರಿದ್ದಾರೆ .
ಶಿಕ್ಷಣ ಕ್ಷೇತ್ರದಲ್ಲಿ ಡಾ.ಡಿ.ಸಿ. ಪಾವಟಿ , ಶ್ರೀ ವಿ.ಕೃ.ಗೋಕಾಕ್ , ಶ್ರೀ ಆಲೂರು ವೆಂಕಟರಾಯ ಶ್ರೀ ಸದಾಶಿವ ಒಡೆಯರ್ ಮತ್ತು ಡಾ. ಚೆನ್ನವೀರಕಣವಿ , ಡಾ. ಎಮ್.ಎಮ್ . ಕಲಬುರ್ಗಿ , ಡಾ. ಆರ್.ಸಿ. ಹಿರೇಮಠ , ಶ್ರೀ ಆರ್.ವೈ. ಧಾರವಾಡಕರ್ ಹಾಗೂ ಶ್ರೀ ಸಿ.ವಿ. ಸವದತ್ತಿ ಇವರೆಲ್ಲರೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ಹುಟ್ಟೂರಾದ ಧಾರವಾಡಕ್ಕೆ ಗೌರವ ತಂದುಕೊಟ್ಟಿದ್ದಾರೆ .
ಇದಕ್ಕಿಂತಲೂ ಹೆಚ್ಚಾಗಿ ವಿಶ್ವವಿದ್ಯಾಲಯಗಳು ಧಾರವಾಡದಲ್ಲಿವೆ . ಕರ್ನಾಟಕ ವಿಶ್ವವಿದ್ಯಾನಿಲಯ , ಧಾರವಾಡ ಕೃಷಿ ವಿಶ್ವವಿದ್ಯಾನಿಲಯ , ಕಾನೂನು ವಿಶ್ವವಿದ್ಯಾನಿಲಯ , ಕನರ್ಕಾಟಕ ಹಿಂದಿ ಪ್ರಚಾರ ಸಮಿತಿಯ ಡೀಮ್ಸ್ ವಿಶ್ವವಿದ್ಯಾನಿಲಯ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ಹಾಗೂ ಜೆ.ಎಸ್.ಎಸ್ . ಸಮೂಹ ಶಿಕ್ಷಣ ಸಂಸ್ಥೆಗಳು ರಾಜ್ಯಕ್ಕೆ ದೇಶಕ್ಕೆ ಉತ್ತಮವಾದ ಸೇವೆ ಮತ್ತು ಕೊಡುಗೆಯನ್ನು ಕೊಟ್ಟಿವೆ . ಇಂತಹ ಮಹಾನಗರಕ್ಕೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ.
ಪ್ರತಿವಾರ ಎರಡು ಮಂಗಳವಾರ ಮತ್ತು ಶುಕ್ರವಾರ ಧಾರವಾಡದಲ್ಲಿ ಎಲ್ಲಾ ಹಿರಿಯ ಅಧಿಕಾರಿಗಳು ಸೇರಿ ಜನರ ಸಮಸ್ಯೆ ಬಗ್ಗೆ ಚರ್ಚಿಸಿ , ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ
ಆದರೆ , ಕೆಲಸದ ಒತ್ತಡದಿಂದಾಗಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರಲು ಸಾಧ್ಯವಾಗುತ್ತಿಲ್ಲ . ಒಂದುವೇಳೆ , ಧಾರವಾಡ ಪ್ರತ್ಯೇಕ ಪಾಲಿಕೆ ಆದಲ್ಲಿ ಅಧಿಕಾರ ವಿಕೇಂದ್ರಿಕರಣವಾಗಿ , ಹುಬ್ಬಳ್ಳಿ ಮತ್ತು ಧಾರವಾಡ ನಗರಕ್ಕೆ ಪ್ರತ್ಯೇಕ ಮೇಯರ , ಉಪ ಮೇಯರ್ , ಸ್ಥಾಯಿ ಸಮಿತಿ ಅಧ್ಯಕ್ಷರು , ಆಯುಕ್ತರು , ಇತರೆ ಸಿಬ್ಬಂದಿ ಲಭ್ಯವಾಗುವುದರಿಂದ ನಗರದ ಎಲ್ಲಾ ಸಮಸ್ಯೆಗಳಿಗೆ ಪೂರಕವಾಗಿ ಉತ್ತರ ದೊರೆಯಲಿದೆ.
ಧಾರವಾಡವನ್ನು ಪ್ರತ್ಯೇಕ ಮಹಾನಗರಪಾಲಿಕೆಯನ್ನಾಗಿ ರಚಿಸುವುದರಿಂದ ಹುಬ್ಬಳ್ಳಿ – ಧಾರವಾಡ ಅವಳಿ ಮಹಾನಗರಗಳು ಅಭಿವೃದ್ಧಿ ಹೊಂದಬೇಕು ಎನ್ನುವುದರಲ್ಲಿ ವಿಶ್ವಾಸವಿದೆ.
ಈ ದಿಸೆಯಲ್ಲಿ , ಈಗಾಗಲೇ ಪ್ರಜ್ಞಾವಂತ ಮಹಾನಗರದ ಧಾರವಾಡದ ಹಿರಿಯರು ಮತ್ತು ಯುವಕರು ಸೇರಿ ಪ್ರತ್ಯೇಕ ಪಾಲಿಕೆ ಹೋರಾಟವನ್ನು ಪ್ರಾರಂಭಿಸಿದ್ದಾರೆ .
ಇದಕ್ಕೆ ಬಹಳಷ್ಟು ಬೆಂಬಲವಿದೆ. ಈ ಕಾರಣದಿಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ .
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶರಣಪ್ಪ ಕೊಟಗಿ ಸೇರಿದಂತೆ ಮುಂತಾದವರು ಇದ್ದರು.