ಧಾರವಾಡ prajakiran.com : ಮಳೆ ಆದರೂ ಒಂದು ಸಂಕಟ.. ಬಿಟ್ಟರೂ ಒಂದು ಸಂಕಟ.. ಏನೇ ಆದರೂ ನಷ್ಟ ಅನುಭವಿಸೋದು ರೈತ ಮಾತ್ರ.
ಹೌದು! ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಕಟಾವಿಗೆ ಬರಬೇಕಿದ್ದ ಆಲೂಗಡ್ಡೆ ಅದೇ ಜಮೀನಿನಲ್ಲಿ ಕೊಳೆಯುವಂತಾಗಿದೆ. ನಿರಂತರ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಧಾರವಾಡ ಜಿಲ್ಲೆಯ ಆಲೂಗಡ್ಡೆ ಬೆಳೆ ರಾಜ್ಯ ಹಾಗೂ ಅಂತರ ರಾಜ್ಯಗಳಿಗೂ ರಫ್ತಾಗುತ್ತಿತ್ತು. ಈ ಆಲೂಗಡ್ಡೆ ಬೆಳೆ ಕೂಡ ರೈತರಿಗೆ ಉತ್ತಮ ಆದಾಯ ತಂದು ಕೊಡುತ್ತಿತ್ತು.
ಆದರೆ, ನಿರಂತರ ಮಳೆಯಿಂದಾಗಿ ಸೊಂಪಾಗಿ ಬೆಳೆದು ನಿಂತು ದೊಡ್ಡ ದೊಡ್ಡ ಗಡ್ಡೆಯನ್ನೂ ಬಿಟ್ಟಿದ್ದ ಆಲೂಗಡ್ಡೆ ಬೆಳೆ ಇದೀಗ ರೈತರ ಜಮೀನಿನಲ್ಲಿಯೇ
ಕೊಳೆತು ಕೆಟ್ಟ ವಾಸನೆ ಬರತೊಡಗಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 1100 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ.
ಆ ಪೈಕಿ 810 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಸಂಪೂರ್ಣ ಹಾಳಾಗಿದೆ.
ಮಳೆ ಸರಿದು ಉತ್ತಮ ಫಸಲು ಬಂದಿದ್ರೆ ಆಲೂಗಡ್ಡೆ ಕ್ವಿಂಟಾಲ್ ಗೆ 3 ಸಾವಿರ ಬೆಲೆ ಬಾಳುತ್ತಿತ್ತು.
ಆದರೆ, ಇದೀಗ ಆಲೂಗಡ್ಡೆ ಬೆಳೆಗೆ ಖರ್ಚು ಮಾಡಿದಷ್ಟೂ ಹಣ ರೈತನ ಕೈ ಸೇರದಂತಾಗಿದೆಎಂದು ಆಲೂಗಡ್ಡೆ ಬೆಳೆದ ಧಾರವಾಡದ ಕಮಲಾಪುರ ರೈತ ನಕುಲ ಸಂಕೋಜಿ ಈ ಬಗ್ಗೆ ತಮ್ಮ ಅಳಲು ತೊಡಗಿಕೊಂಡಿದ್ದಾರೆ.
ಸಾಕಷ್ಟು ಖರ್ಚು ಮಾಡಿ ಆಲೂಗಡ್ಡೆ ಬೆಳೆದಿದ್ದೆವು. ಆದರೆ ಫಸಲು ಮಳೆಯ ಪಾಲಾಗಿದೆ ಎಂದು ಇನ್ನೋರ್ವ ರೈತ ಮಲ್ಲಿಕಾರ್ಜುನ ಅನಾಡ ಬೇಸರ ವ್ಯಕ್ತಪಡಿಸಿದರು.
ಇದು ಆಲೂಗಡ್ಡೆ ಬೆಳೆದ ರೈತರ ಪರಿಸ್ಥಿತಿ ಮಾತ್ರವಲ್ಲ. ಪ್ರಸಕ್ತ ಮುಂಗಾರು ಬೆಳೆ ಬೆಳೆದ ಬಹುತೇಕ ರೈತರ ಪರಿಸ್ಥಿತಿಯೂ ಇದೇ ಆಗಿದೆ.
ಮಳೆಗೆ ಸಿಕ್ಕು ಅಂದಕೊಂಡಷ್ಟು ಪೀಕು ಬಂದಿಲ್ಲ. ಕೂಡಲೇ ಸರ್ಕಾರಗಳು ರೈತನಿಗೆ ಬೆಳೆ ಪರಿಹಾರ ನೀಡಲು ಮುಂದಾಗಬೇಕು ಎಂಬುದು ನಮ್ಮ ಕಳಕಳಿ.