ಉಪವಿಭಾಗಾಧಿಕಾರಿ ಮಹ್ಮದ ಜುಬೇರ್ ವರ್ಗಾವಣೆ
ಧಾರವಾಡ prajakiran.com : ಧಾರವಾಡ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಅವರನ್ನು ರಾಜ್ಯ ಸರಕಾರ ಸ್ಥಾನ ತೋರಿಸದೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅವರು ಸದ್ಯ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಡಾ.ಗೋಪಾಲಕೃಷ್ಣ ಬಿ.ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
ಡಾ.ಗೋಪಾಲಕೃಷ್ಣ ಅವರು ಮಂಗಳವಾರ ಮಹ್ಮದ ಜುಬೇರ ಅವರಿಂದ ಅಧಿಕಾರ ಸ್ವೀಕರಿಸಿದರು.
ಗೋಪಾಲಕೃಷ್ಣ ೨೦೧೮ ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ.
ಕೆಲಕಾಲ ವೈದ್ಯಕೀಯ ಸೇವೆ ಸಲ್ಲಿಸಿದ ಇವರು ೨೦೧೭ ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಡಿಟ್ ಸರ್ವಿಸ್ಗೆ ಆಯ್ಕೆಯಾಗಿದ್ದರು.
೨೦೧೮ ರ ಪರೀಕ್ಷೆಗಳಲ್ಲಿ ಐಎಎಸ್ಗೆ ಆಯ್ಕೆಯಾದರು. ಕಲಬುರ್ಗಿಯಲ್ಲಿ ಜಿಲ್ಲಾ ತರಬೇತಿ ಪೂರೈಸಿ ಇದೀಗ ಧಾರವಾಡ ಉಪವಿಭಾಗಾಧಿಕಾರಿ ಹುದ್ದೆಗೆ ನಿಯುಕ್ತಿಯಾಗಿದ್ದಾರೆ.
ನೂತನ ಉಪವಿಭಾಗಾಧಿಕಾರಿಗಳನ್ನು ಜಿಲ್ಲೆಯ ತಹಸೀಲ್ದಾರರಾದ ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ಅಶೋಕ ಶಿಗ್ಗಾಂವಿ, ಅಮರೇಶ ಪಮ್ಮಾರ ಮತ್ತಿತರರು ಸ್ವಾಗತಿಸಿ, ಅಭಿನಂದಿಸಿದರು.