ಜಿಲ್ಲೆಯ ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು : ದೀಪಕ ಚಿಂಚೋರೆ ಆರೋಪ
ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ 2021ರಲ್ಲಿಯೂ ನಡೆಯುವುದು ಬಹುತೇಕ ಅನುಮಾನ ಎಂಬಂತೆ ಕಾಣುತ್ತಿದೆ ಎಂದು ಎಐಸಿಸಿ ಸದಸ್ಯರು ಹಾಗೂ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಆಗಿರುವ ದೀಪಕ ಚಿಂಚೋರೆ ಆರೋಪಿಸಿದ್ದಾರೆ.
ಅವರು ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು ಬಿಜೆಪಿ ಶಾಸಕರ ಅಣತಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ.
ಹೀಗಾಗಿ ಅವರಿಗೆ ಚುನಾವಣೆ ಆಗುವುದು ಬೇಡವಾಗಿದೆ. ಮಹಾನಗರ ಪಾಲಿಕೆಯಲ್ಲಿ ಶಾಸಕರ ಹಾಗೂ ಅಧಿಕಾರಿಗಳ ದರಬಾರ್ ನಡೆಯುತ್ತಿದೆ.
ಅಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ದೂರಿದರು.
ಜಿಲ್ಲೆಯ ಅಧಿಕಾರಿಗಳು ಸಂಪೂರ್ಣವಾಗಿ ಶಾಸಕರ ಹಿಡಿತದಲ್ಲಿದ್ದಾರೆ.
ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಹೀಗಾಗಿ ಇವರು 2021ರ ಜನಗಣತಿಯಂತೆ ಚುನಾವಣೆ ನಡೆಸಬೇಕೆಂಬ ಹುನ್ನಾರ ನಡೆಸುತ್ತಿದ್ದಾರೆ.
2011ರ ಜನಗಣತಿ ಪ್ರಕಾರ ಚುನಾವಣೆ ಆಗುವುದು ಅನುಮಾನ ಎಂದು ದೂರಿದರು. ತಕ್ಷಣ ಚುನಾವಣೆ ಮಾಡಿರಿ. ಇಲ್ಲದಿದ್ದರೆ ಹಳೆಯ ಚುನಾಯಿತ ಪ್ರತಿನಿಧಿಗಳಿಗೆ ಪುನರ್ ಆಯ್ಕೆ ಘೋಷಿಸಿ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸೋಲಿನ ಭೀತಿಯಿಂದ ಜೆಡಿಎಸ್ ಮುಖಂಡರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದೆ.
ಜಿಲ್ಲೆಯ ಬಿಜೆಪಿ ಅಧ್ಯಕ್ಷರು ಆಗಿರುವ ಧಾರವಾಡ ಶಾಸಕ ಅರವಿಂದ ಬೆಲ್ಲದ ಅವರು ಬಿಆರ್ ಟಿ ಎಸ್ ಅವ್ಯವಹಾರದ ಬಗ್ಗೆ ಸಂಪೂರ್ಣ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಬೇಕು. ಕೇವಲ ಪತ್ರಿಕಾ ಹೇಳಿಕೆಗೆ ಅವರ ಆರೋಪ ಸಿಮೀತವಾಗವಾರದು ಎಂದು ಆಗ್ರಹಿಸಿದರು.
ಈ ಹಿಂದೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹಿಂಬಾಲಕರಾದ ವಿಜಯಾನಂದ ಶೆಟ್ಟಿ ಸೇರಿದಂತೆ ಅನೇಕರು ಹೈಕೋರ್ಟ್ ಹೋಗಿ ತಡೆಯಾಜ್ಞೆ ತಂದಿದ್ದರು.
ಅವರಿಗೆ ಚುನಾವಣೆಯಾಗಬಾರದೆಂಬ ಹೆಬ್ಬಯಕ್ಕೆ ಹೊಂದಿದ್ದಾರೆ ಎಂದು ಕಿಡಿಕಾರಿದರು.
ವಾರ್ಡ್ ಪುನರ್ ವಿಂಗಡಣೆ ಬಿಜೆಪಿಗೆ ಎಲ್ಲಿ ಮತಗಳು ಹೆಚ್ಚಿಗೆ ಬಿದ್ದಿವೆ. ಕಡಿಮೆ ಬಿದ್ದಾವ ಅವುಗಳನ್ನು ಹರಿದು ಹಂಚಿ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ತಮಗೆ ಮನಬಂದಂತೆ ಪುನರ್ ವಿಂಗಡಣೆ ಮಾಡುತ್ತಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಭಯಭೀತರಾಗಿದ್ದಾರೆ. ಕೆಲವರು ಪೋನ್ ಸ್ವೀಚ್ ಆಫ್ ಆಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸಚಿವ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ ದರಬಾರ್ ನಡೆಯುತ್ತಿದೆ. ಬಿಜೆಪಿ ಶಾಸಕರಿಗೆ ಮಹಾನಗರ ಪಾಲಿಕೆ ಸದಸ್ಯರು ಬೇಕಾಗಿಲ್ಲ ಎಂದು ದೂರಿದರು.
ಅವಳಿನಗರದ ಒಳಚರಂಡಿ ರಿಪೇರಿ, ರಸ್ತೆ ರಿಪೇರಿ, ಜನರ ಗೋಳು ಆಲಿಸುವವರಿಲ್ಲ. ಕೇಳುವವರಿಲ್ಲ. ಹೇಳುವವರಿಲ್ಲದಂತಾಗಿದೆ. ಅವಳಿ ನಗರದಲ್ಲಿ ಈವರೆಗೆ ಶಾಸಕರು ವಾರ್ಡ್ ವಾರು ಸಮಿತಿ ಕೂಡ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾರ್ಡ್ ವಿಂಗಡಣೆ, ಮೀಸಲಾತಿ ಅನ್ಯಾಯ ನೆಪ, ಆಕ್ಷೇಪ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮುಂದೆ ಮಳೆಗಾಲ ನೆಪದಲ್ಲಿ ಮತ್ತೇ ಮುಂದೂಡುವ ಕೆಲಸ ಮಾಡಲಾಗುತ್ತದೆ.
ಬೇಕಂತಲೇ ವಿಳಂಬ ಮಾಡಿ 2021ರ ಜನಗಣತಿ ಪ್ರಕಾರ ಚುನಾವಣೆ ಮಾಡುವ ಹುನ್ನಾರ ನಡೆದಿದೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. 2011ರ ಜನಗಣತಿ ಪ್ರಕಾರವೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಸಿ ಎಂದು ಒತ್ತಾಯಿಸಿದರು.
ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಐಸಿಸಿ ಸದಸ್ಯರು ಆಗಿರುವ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಣಿಚೆನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಸುಭಾಸ ಶಿಂಧೆ, ಯಾಶೀನ್ ಹಾವೇರಿಪೇಟೆ, ಮಾಜಿ ಮೇಯರ್ ಐ.ಎಂ. ಜವಳಿ, ಚನ್ನಗೌಡರ, ಪಠಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.